ರಾಯಚೂರು: “ಗ್ಯಾರಂಟಿ ಯೋಜನೆಯಿಂದ ನೀವೂ ಸಂತೋಷದಿಂದ ಇದ್ದೀರಿ. ನುಡಿದಂತೆ ನಡೆದಿರುವ ಸರ್ಕಾರ ನಮ್ಮದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಗ್ಯಾರಂಟಿ ಯೋಜನೆಯಿಂದ ನೀವೂ ಸಂತೋಷದಿಂದ ಇದ್ದೀರಿ. ನುಡಿದಂತೆ ನಡೆದಿರುವ ಸರ್ಕಾರ ನಮ್ಮದು. ಬಿಜೆಪಿಯವರು ಬೇಕಾದಷ್ಟು ಮಾತು ಕೊಟ್ಟಿದ್ರು, ಜನಧನ್ ಅಕೌಂಟ್ ಓಪನ್ ಮಾಡಿದ್ರೆ 15 ಲಕ್ಷ ಅಂತ ಹೇಳಿದ್ರು, ನಾಲ್ಕು ವರ್ಷ ಬಿಜೆಪಿ ಸರ್ಕಾರ ಇತ್ತು. ಒಂದು ಯೋಜನೆ ಜಾರಿ ಮಾಡಲಿಲ್ಲ. ನೀರು ಕೊಡಲಿಲ್ಲ, ತೆರಿಗೆಯೂ ಕೊಡಲಿಲ್ಲ, ಅನ್ನ ಕೊಡಲಿಲ್ಲ, ಸೂರು ಕೊಡಲಿಲ್ಲ, ಅಚ್ಛೇ ದಿನವೂ ಬರಲಿಲ್ಲ, ಇನ್ನೂ ಏತಕ್ಕೆ ಬರುತ್ತಿದ್ದಾರೋ ನನಗೆ ಗೊತ್ತಿಲ್ಲ” ಎಂದು ಬಿಜೆಪಿಯನ್ನು ಟೀಕಿಸಿದರು.
ಅಬ್ಬಬ್ಬಾ ಗೊತ್ತೇ ಇರಲಿಲ್ಲ..! ಈ 5 ಸೊಪ್ಪುಗಳಲ್ಲಿ ಅಡಗಿವೆ ಅದ್ಭುತ ಆರೋಗ್ಯ ಪ್ರಯೋಜನಗಳು
“ಕಮಲ ಕೆರೆಯಲ್ಲಿ ಇದ್ರೆ ಚೆಂದ, ತೆನೆ ಹೊಲದಲ್ಲಿ ಇದ್ರೆ ಚೆಂದ, ಈ ದಾನ – ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದದ್ದಕ್ಕೆ ಗ್ಯಾರಂಟಿ ಜಾರಿಗೆ ಅನುಕೂಲವಾಯ್ತು” ಎಂದು ಕವನ ವಾಚಿಸಿದರು. “ರಾಯಚೂರು ಇದೊಂದು ಶಕ್ತಿಯ ಭೂಮಿ. ಇದು ಚಿನ್ನದ ನಾಡು, ನೀವು ಕೊಟ್ಟಂತಹ ಶಕ್ತಿಯಿಂದ ಈ ಭಾಗಕ್ಕೆ ಪ್ರಜಾಧ್ವನಿ ಯಾತ್ರೆಗೆ ಬಂದಿದ್ದೆವು. ಮಲ್ಲಿಕಾರ್ಜುನ ಖರ್ಗೆ ಮುಖಂಡತ್ವದಲ್ಲಿ ಗಾಂಧಿ ಬಾವಿಗೆ ಹೋಗಿ ನೀರು ತೆಗೆದು ಹೊರಗೆ ಚೆಲ್ಲಿದ್ದೆವು.
200 ಯೂನಿಟ್ವರೆಗೆ ವಿದ್ಯುತ್ ಕೊಡಬೇಕು ಎಂದು ಅಂದು ಪ್ರಜಾ ಧ್ವನಿಯಾತ್ರೆ ದಿನ ಘೋಷಣೆ ಮಾಡಿದ್ದೆವು. ಇಂದಿರಾಗಾಂಧಿ ಮೊಮ್ಮಗಳಾದ ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ತಿಂಗಳಿಗೆ 2000 ರೂಪಾಯಿ ಕೊಡಲು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದೆವು. ಮನೆಯ ರೇಷನ್ಗೆ, ಎಣ್ಣೆಗೆ, ಗ್ಯಾರಂಟಿ ಚೆಕ್ಗೆ ಅಂದೇ ನಮ್ಮ ಹಾಗೂ ಸಿದ್ಧರಾಮಯ್ಯ ಕೈಲಿ ಸಹಿ ಮಾಡಿಸಿ ಮನೆ ಮನೆಗೆ ಹಂಚಿದ್ದೆವು. ಇವತ್ತು ಆ ಚೆಕ್ ಜಾರಿಯಾಗಿ, ಅನುಷ್ಠಾನಕ್ಕೆ ಬಂದಿದೆ. ಇವತ್ತು ಐದು ಗ್ಯಾರಂಟಿಗಳು ಜಾರಿಯಾಗಿವೆ” ಎಂದರು.