ಚಿಕ್ಕಮಗಳೂರು:- ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ಆರೋಪ ಕೇಳಿಬರುತ್ತಿದೆ. ಸಿದ್ದರಾಮಯ್ಯ ವಿರುದ್ಧ ಹೇಳಿಕೆಗಳನ್ನು ನೀಡುವ ನಾಯಕರಿಗೆ ಬಿಜೆಪಿಯಲ್ಲಿ ಟಿಕೆಟ್ ಮಿಸ್ ಆಗುತ್ತಿದೆ ಎಂಬುದು ಕಾರ್ಯಕರ್ತರ, ಮುಖಂಡರ ಆರೋಪವಾಗಿದೆ. ಇದೇ ಆರೋಪವನ್ನು ಸಿಟಿ ರವಿ ಅವರ ಬೆಂಬಲಿಗರೂ ಮಾಡಿದ್ದಾರೆ.
ಟಿಕೆಟ್ ಘೋಷಣೆಗೂ ಮುನ್ನ, ಕೇಂದ್ರ ಸಚಿವೆಯೂ ಆಗಿರುವ ಚಿಕ್ಕಮಳೂರು-ಉಡುಪಿ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಸಿಟಿ ರವಿ ಬೆಂಬಲಿಗರು ಸಿಡಿದೆದ್ದಿದ್ದರು. ಈ ಬಾರಿ ಶೋಭಾಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದರು. ಟ್ರೋಲ್ಗಳನ್ನು ಕೂಡ ಮಾಡಿದ್ದರು. ಗೋ ಬ್ಯಾಕ್ ಅಭಿಯಾನವನ್ನೂ ನಡೆಸಿದ್ದರು. ಇದೀಗ ಸಿಟಿ ರವಿ ಅವರಿಗೆ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವಾಟ್ಸ್ಆ್ಯಪ್, ಸಾಮಾಜಿಕ ಜಾಲದಲ್ಲಿ ಸಿಟಿ ರವಿ ಪರ ಅಭಿಯಾನ ನಡೆಸುತ್ತಿರುವ ಅಭಿಮಾನಿಗಳು, ಮೌನಿ ಕೋಟಗೆ ಟಿಕೆಟ್ ಕೊಟ್ಟು ಕಾರ್ಯಕರ್ತರನ್ನು ಸೈಲೆಂಟ್ ಮಾಡಿದರು. ಎಲ್ಲಿದೆ ನ್ಯಾಯ?ನಿಷ್ಠಾವಂತ ಕಾರ್ಯಕರ್ತರ ಕಗ್ಗೊಲೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯಗೆ ಯಾರೆಲ್ಲ ಬೈಯುತ್ತಾರೋ ಅವರಿಗೆ ಟಿಕೆಟ್ ಇಲ್ಲ. ಇದು ಅಡ್ಜಸ್ಟ್ಮೆಂಟ್ ರಾಜಕೀಯ ಎಂದು ಆಕ್ರೋಶ ಹೊರಹಾಕಿದ್ದಾರೆ.