ಮೈಸೂರು: ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚುನಾವಣಾ ರಾಜಕೀಯಕ್ಕೆ ಕಾಲಿಡಲಿದ್ದು, ಒಡೆಯರ್ ರಾಜವಂಶದ ಕೊನೆಯ ವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಒಡೆಯರ್ ಅವರು ಮಕ್ಕಳಿಲ್ಲದ ಕಾರಣ ಯದುವೀರ್ ಗೋಪಾಲ್ ರಾಜ್ ಅರಸ್ ಅವರನ್ನು ದತ್ತು ಪಡೆದರು. ನಂತರ ಅವರನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಮರುನಾಮಕರಣ ಮಾಡಲಾಯಿತು.
ಇದಾದ ನಂತರ ಸತತ ಒಂಬತ್ತು ವರ್ಷದಿಂದ ಮೈಸೂರು ಅರಮನೆಯ ಭಾಗವೇ ಆಗಿರುವ ಯದುವಂಶದ ಯದುವೀರ್ ಅವರು ಓದಿದ್ದು ಬೆಂಗಳೂರು ಹಾಗೂ ವಿದೇಶದಲ್ಲಿ. ಅರ್ಥಶಾಸ್ತ್ರದಲ್ಲಿ ಬಿಎ. ಎಂಎ ಪದವಿಯನ್ನು ಪಡೆದವರು, ಯದುವೀರ್ಗೆ ಈಗ 32 ವರ್ಷ. ಜನಿಸಿದ್ದು 24 ಮಾರ್ಚ್ 1992 ರಂದು ಬೆಂಗಳೂರಿನಲ್ಲಿ. ಅವರ ತಂದೆ ಸ್ವರೂಪ ಗೋಪಾಲರಾಜೇ ಅರಸ್ ಬೆಂಗಳೂರಿನಲ್ಲಿದ್ದ ಕಾರಣ ಅಲ್ಲಿಯೇ ಜನನವಾಯಿತು.
ಮೈಸೂರು ಹಾಗೂ ಬೆಂಗಳೂರು ಅರಮನೆಯ ಉಸ್ತುವಾರಿ, ರಾಜವಂಶಸ್ಥ ಆಸ್ತಿಗಳು, ಸಂಸ್ಥೆಗಳನ್ನು ಯದುವೀರ್ ಒಡೆಯರ್ ನೋಡಿಕೊಂಡು ಬರುತ್ತಿದ್ದಾರೆ. ಅಲ್ಲದೇ ದಸರಾ ಸೇರಿದಂತೆ ವರ್ಷದ ವಿವಿಧ ಸಮಯದಲ್ಲಿ ಅರಮನೆಯಲ್ಲಿ ನಡೆಯುವ ಸಂಪ್ರದಾಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಯದುವೀರ್ಗೆ ಮಠಗಳು, ಧರ್ಮಗುರುಗಳ ಬಗ್ಗೆ ಅಪಾರ ನಂಬಿಕೆ. ಆಗಾಗ ಮಠಗಳಿಗೆ ಭೇಟಿ ನೀಡುವುದು, ಆಶಿರ್ವಾದ ಪಡೆದುಕೊಂಡು ಬರುತ್ತಾರೆ. ಅದರಲ್ಲೂ ಶೃಂಗೇರಿ ಮಠ, ಮೈಸೂರು ಪರಕಾಲ ಮಠದ ಬಗ್ಗೆ ಗೌರವ ಹೆಚ್ಚೇ ಇದೆ.
ಯದುವೀರ್ ಅವರನ್ನು ಬಿಜೆಪಿಗೆ ಕರೆ ತಂದು ಅವರಿಗೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಮಾಡುವ ಪ್ರಯತ್ನ ಎರಡು ವರ್ಷದಿಂದ ನಡೆದಿತ್ತು. ಹಿಂದೆ ಅವರ ತಾತಾ ಜಯಚಾಮರಾಜೇಂದ್ರ ಒಡೆಯರ್ ಕರ್ನಾಟಕದ ಮಹಾರಾಜರಾಗಿದ್ದರು. ತಂದೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈಸೂರು ಸಂಸದರಾಗಿದ್ದರು. ಯದುವೀರ್ ಎಂಟು ವರ್ಷ ಹಿಂದೆ ಮದುವೆಯಾಗಿದ್ದು ರಾಜಸ್ಥಾನದ ಡುಂಗರ್ ಪುರ್ ಸಂಸ್ಥಾನದ ತ್ರಿಷಿಕಾಕುಮಾರಿಸಿಂಗ್ ಅವರನ್ನು. ಆನಂತರ ಅವರು ತ್ರಿಷಿಕಾ ಕುಮಾರಿ ಒಡೆಯರ್ ಆಗಿ ಬದಲಾದರು,
ಯದುವೀರ್ ಅವರು ರಾಜಕೀಯಕ್ಕೆ ಬರುವ ಹಿಂದೆ ತ್ರಿಷಿಕಾಕುಮಾರಿ ಅವರ ತವರುಮನೆಯ ಒತ್ತಾಸೆಯೂ ಇದೆ. ಅವರ ತಂದೆ, ಸಂಬಂಧಿಕರು ರಾಜಸ್ಥಾನದಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ತಾಯಿ ಪ್ರಮೋದಾದೇವಿ ಅವರನ್ನು ಸಂಪರ್ಕಿಸಿ ಬಿಜೆಪಿಗೆ ಕರೆ ತರುವ ಪ್ರಯತ್ನ ನಡೆದಿತ್ತು. ಇದರ ನಡುವೆ ಯದುವೀರ್ ಹಲವಾರು ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದರು. ಕರ್ನಾಟಕದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ದಿನ ಕಳೆದು ಬರುತ್ತಿದ್ದ ಸನ್ನಿವೇಶಗಳೂ ಇವೆ. ಅವರ ನಡೆ- ನುಡಿ ಗಮನ ಸೆಳೆದಿತ್ತು.
ಯದುವೀರ್ ಮೂರು ದಶಕದ ನಂತರ ಅವರ ತಂದೆಯಂತೆ ಬಿಜೆಪಿಯಿಂದ ಈಗ ಅಭ್ಯರ್ಥಿಯಾಗಲಿದ್ದಾರೆ. ಯದುವೀರ್ ಪುತ್ರ ಆದ್ಯವೀರ್ ಈಗ ಐದು ವರ್ಷದ ಬಾಲಕ. ಅಂದರೆ ಎರಡು ದಶಕದ ಹಿಂದೆ ಶ್ರೀಕಂಠದತ್ತ ಒಡೆಯರ್ ಕೊನೆಯದಾಗಿ ಕಾಂಗ್ರೆಸ್ನಿಂದ ಚುನಾವಣೆ ಎದುರಿಸಿ ಸೋತಿದ್ದರು. ಈಗ ಯದುವೀರ್ ಅವರ ಹೊಸ ರಾಜಕೀಯ ಇನ್ನಿಂಗ್ಸ್ ಶುರುವಾಗುತ್ತಿದೆ.