ಯಾದಗಿರಿ: ಸಂವಿಧಾನ ಬದಲಾವಣೆ ಮಾಡ್ತೀವಿ ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ರಾಜೂಗೌಡ (Raju Gowda) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾದಗಿರಿ (Yagir) ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಫಲಾನುಭವಿಗಳ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸದ ಅನಂತ್ ಕುಮಾರ್ (Anantkumar Hegde) ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ.
ಈಗ ಒಬ್ಬ ಹೆಗಡೆ ಎನ್ನುವವನು ಎಲ್ಲೋ ಮಾತಾಡಿದ್ದಾನೆ. ಸಂವಿಧಾನ ಚೇಂಜ್ ಮಾಡ್ತೀವಿ ಅಂತಾ ಹೇಳಿದ್ದಾನೆ. ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನಕ್ಕೆ ಏನು ಮಾಡಕಾಗಲ್ಲ. ಸಂವಿಧಾನ ಮುಟ್ಟುವುದಕ್ಕೂ ಆಗಲ್ಲ. ಚೇಂಜ್ ಮಾಡೋಕೂ ಆಗಲ್ಲ. ಅಂಬೇಡ್ಕರ್ ಬರೆದ ಸಂವಿಧಾನವನ್ನು ಮೋದಿ ಅವ್ರು ರಕ್ಷಣೆ ಮಾಡ್ತಿದ್ದಾರೆ. ಸಂವಿಧಾನವನ್ನು ತಲೆ ಮೇಲೆ ಇಟ್ಕೊಂಡು ಹೋಗುವಂತಹ ಕೆಲಸ ಮೋದಿ, ಬಿಜೆಪಿ ಮಾಡಿದೆ ಎಂದು ಹೇಳಿದರು.
ಒಳ ಮೀಸಲಾತಿ ವಿಚಾರದಲ್ಲೂ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ರಾಜೂಗೌಡ, ಮೀಸಲಾತಿ ಹೆಚ್ಚಳವನ್ನು ಬಿಜೆಪಿ ಸರ್ಕಾರ ಮಾಡಿದೆ. ಎಲ್ಲೋ ನಿಂತು ಒಳ ಮೀಸಲಾತಿ ಮಾಡಿದ್ರು. ನಾನು ನಿಮ್ಮ ಪರ ನಿಂತೆ. ಆದ್ರೆ ಅದರ ಏಟು ನನಗೆ ಬಿತ್ತು ಎಂದು ಸಭೆಯಲ್ಲಿ ನೋವು ತೋಡಿಕೊಂಡರು. ಸಂವಿಧಾನ ವಿರೋಧಿ ಇದ್ರೆ ಮೀಸಲಾತಿ ಹೆಚ್ಚಳ ಯಾಕೆ ಮಾಡ್ತಿತ್ತು. ಎಸ್ಸಿ ಸಮುದಾಯಕ್ಕಿದ್ದ 15% ಮೀಸಲಾತಿಯನ್ನು 17% ಕ್ಕೆ ಹೆಚ್ಚಳ ಮಾಡಿತು. ಎಸ್ಟಿಗೆ 3% ಇದ್ದದ್ದನ್ನು 7% ಗೆ ಮೀಸಲಾತಿ ಹೆಚ್ಚಳ ಮಾಡಿತು ಎಂದರು.