ಬೆಂಗಳೂರು:- ಶೇ.60 ರಷ್ಟು ಕನ್ನಡ ಬೋರ್ಡ್ ಹಾಕದ ಅಂಗಡಿಗಳ ಲೈಸೆನ್ಸ್ ರದ್ದು ಮಾಡುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ
ಡೆಡ್ಲೈನ್ ಮುಕ್ತಾಯ ಹಿನ್ನೆಲೆ ಇಂದು ನಾಮಫಲಕ ಪರಿಶೀಲನೆ ನಡೆಸಲು ಮುಂದಾದ ಪಾಲಿಕೆ ಅಧಿಕಾರಿಗಳು, ಶೇಕಡಾ 60ರಷ್ಟು ಕನ್ನಡ ನಾಮಫಲಕ ಅಳವಡಿಸದಿದ್ದರೆ ಪರವಾನಗಿ ರದ್ದು ಮಾಡಿ ಬೀಗ ಜಡಿಯುವುದಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಕನ್ನಡ ನಾಮಫಲಕ ಕಡೆಗಣಿಸಿದವರಿಗೆ ಪಾಲಿಕೆ ಅಧಿಕಾರಿಗಳು ಬಿಸಿಮುಟ್ಟಿಸಲು ಮುಂದಾಗಿದ್ದಾರೆ.
ಕನ್ನಡ ನಾಮಫಲಕ ಹಾಕದಿದ್ದರೆ ಅಂಗಡಿಗಳನ್ನು ಬಂದ್ ಮಾಡುತ್ತೇವೆ. ಈಗಾಗಲೇ ಶೇಕಡಾ 90ರಷ್ಟು ಕನ್ನಡ ನಾಮಫಲಕ ಹಾಕಲಾಗಿದೆ. ಇನ್ನು ಉಳಿದಿರುವುದು 3 ಸಾವಿರ ನಾಮಫಲಕ ಮಾತ್ರ. ಮತ್ತಷ್ಟು ಸಮಯ ನೀಡುವಂತೆ ಅಂತಾರಾಷ್ಟ್ರೀಯ ಕಂಪನಿಗಳು, SBI, ಕೆನರಾ ಬ್ಯಾಂಕ್ ಮನವಿ ನೀಡಿವೆ. ಈ ಬಗ್ಗೆ ಇಂದು ಸಂಜೆ ತೀರ್ಮಾನ ಮಾಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.