ಗುಜರಾತ್ ಟೈಟಲ್ಸ್ ವಿರುದ್ಧ RCB ತಂಡಕ್ಕೆ ಭರ್ಜರಿ ಜಯ ಸಿಕ್ಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಜೈಂಟ್ಸ್ ತಂಡಕ್ಕೆ ಸೋಲುಣಿಸಿದೆ. ಈ ಮೂಲಕ ಆರ್ಸಿಬಿ ಆಡಿದ 2 ಪಂದ್ಯಗಳಲ್ಲೂ ಜಯಭೇರಿ ಬಾರಿಸಿದೆ.
ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು.
ಆರಂಭಿಕ ಆಟಗಾರ್ತಿ ಬೆತ್ ಮೂನಿ ಕೇವಲ 8 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ಲಿಚ್ಫೀಲ್ಡ್ 5 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ವೇದಾ ಕೃಷ್ಣ ಮೂರ್ತಿ ಕೇವಲ 9 ರನ್ಗಳಿಸಲಷ್ಟೇ ಶಕ್ತರಾದರು. ಇನ್ನು ಹರ್ಲೀನ್ ಡಿಯೋಲ್ 31 ಎಸೆತಗಳನ್ನು ಎದುರಿಸಿದರೂ ಕಲೆಹಾಕಿದ್ದು ಕೇವಲ 22 ರನ್ಗಳನ್ನು ಮಾತ್ರ
ಇದಾಗ್ಯೂ ಕೆಳ ಕ್ರಮಾಂಕದಲ್ಲಿ ಆರ್ಸಿಬಿ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಹೇಮಲತಾ 31 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುಜರಾತ್ ಜೈಂಟ್ಸ್ ತಂಡವು 107 ರನ್ ಕಲೆಹಾಕಿತು.
108 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ಪರ ಸೋಫಿ ಡಿವೈನ್ (6) ಮತ್ತೊಮ್ಮೆ ವಿಫಲರಾದರು. ಮತ್ತೊಂದೆಡೆ ನಾಯಕಿಯ ಆಟವಾಡಿದ ಸ್ಮೃತಿ ಮಂಧಾನ 27 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 43 ರನ್ ಬಾರಿಸಿ ಮಿಂಚಿದರು.
ಇನ್ನು ಸಬ್ಬಿನೇನಿ ಮೇಘನಾ ಅಜೇಯ 36 ಹಾಗೂ ಎಲ್ಲಿಸ್ ಪೆರ್ರಿ ಅಜೇಯ 23 ರನ್ ಬಾರಿಸುವ ಮೂಲಕ 12.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಆರ್ಸಿಬಿ ತಂಡವು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.