ಚಾಮರಾಜನಗರ:- ನಾಗಮಲೆಗೆ ಹೋಗುವ ಭಕ್ತರಿಗೆ ಶಾಕ್ ನೀಡಿದ ಅರಣ್ಯ ಇಲಾಖೆಯು, ಟ್ರಕ್ಕಿಂಗ್ಗೆ ನಿರ್ಬಂಧ ವಿಧಿಸಿದೆ.
ಮಹದೇಶ್ವರ ಬೆಟ್ಟದಿಂದ 15 ಕಿಲೋಮೀಟರ್ ದೂರ ಇರುವ ನಾಗಮಲೆಗೆ ಕಾಲ್ನಡಿಗೆಯಲ್ಲೇ ಬೆಟ್ಟವನ್ನು ಹತ್ತಿ, ಇಳಿದು ಹೋಗಬೇಕು. ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ನಾಗಮಲೆಗು ಹೋಗುವುದು ವಾಡಿಕೆ. ದೇವರ ದರ್ಶನ ಪಡೆಯಲು ಭಕ್ತರು ನಾಗಮಲೆಗೆ ತೆರಳುತ್ತಾರೆಯೇ ಹೊರತು ಯಾರೂ ಸಹ ಟ್ರಕ್ಕಿಂಗ್ ಹೆಸರಿನಲ್ಲಿ ಹೋಗುವುದಿಲ್ಲ. ಆದರೆ, ಅರಣ್ಯ ಇಲಾಖೆ ಇಲ್ಲಿ ಚಾರಣ ನಿಷೇಧಿಸಿರುವುದರಿಂದ ನಾಗಮಲೆಯಲ್ಲಿ ನೆಲೆಸಿರುವ ಮಹದೇಶ್ವರನ ದರ್ಶನಕ್ಕೆ ಬ್ರೇಕ್ ಬಿದ್ದಿದೆ.
ಇನ್ನು ಚಾರಣ ನಿಷೇಧದಿಂದ ತೊಳಸೀಕೆರೆ, ಪಡಿಸಲನತ್ತ, ಇಂಡಿಗನತ್ತ, ನಾಗಮಲೆ ಗ್ರಾಮಸ್ಥರ ಸಂಕಷ್ಟಕ್ಕೆ ಕಾರಣವಾಗಿದೆ. ನಾಗಮಲೆ ಹೋಗುವ ಭಕ್ತರನ್ನ ನಂಬಿ ಅಂಗಡಿ, ಮುಗ್ಗಟ್ಟು ಹಾಗೂ ಜೀಪ್ಗಳನ್ನು ತಂದಿದ್ದಾರೆ. ಮಹದೇಶ್ವರ ಬೆಟ್ಟದಿಂದ ಜೀಪ್ ಗಳ ಮೂಲಕ ನಾಗಮಲೆಯತ್ತ ಜನರನ್ನು ಕರೆದುಕೊಂಡು ಹೋಗುತ್ತಿದ್ದರು.ಇದೀಗ ಅವರ ಉದ್ಯೋಗ ಕಿತ್ತುಕೊಳ್ಳುವ ಜೊತೆಗೆ ಜನರ ಬದುಕನ್ನು ಮೂರಾಬಟ್ಟೆ ಮಾಡುವ ಕೆಲಸಕ್ಕೆ ಅರಣ್ಯ ಇಲಾಖೆ ಕೈ ಹಾಕಿದೆ. ಬರುವ ಭಕ್ತಾಧಿಗಳನ್ನು ನಂಬಿ ಜೀವನ ಮಾಡುತ್ತಿದ್ದೇವೂ, ಇದೀಗ ಮುಂದೇನು ಎಂದು ದಿಕ್ಕೆ ತೋಚದಂತಾಗಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಸದ್ಯಕ್ಕೆ ನಾಗಮಲೆಗೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದ್ದು, ಭಕ್ತರು ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಚಾರಣಿಗರ ಮೇಲೆ ನಿಗಾಯಿಡಲೂ ಒಂದು ಬುಕ್ಕಿಂಗ್ ಆ್ಯಪ್ ತರಲೂ ಅರಣ್ಯ ಇಲಾಖೆ ಪ್ಲ್ಯಾನ್ ಮಾಡಿದೆ.