ಗಾಂಧಿನಗರ: ತಲೆ ಕೆಟ್ಟವರು ಮಾತ್ರ ನನ್ನ ಜನರನ್ನ ಕುಡುಕರು ಅನ್ನುತ್ತಾರೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಗುಜರಾತ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಾರಣಾಸಿಯಲ್ಲಿ ಮದ್ಯ ಸೇವಿಸಿ ರಸ್ತೆಯಲ್ಲೇ ಜನರು ಬಿದ್ದಿರುವುದನ್ನು ನಾನು ನೋಡಿದ್ದೇನೆ ಎಂಬ ರಾಹುಲ್ ಗಾಂಧಿ (Rahul Gandhi) ಹೇಳಿಕೆ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ನ ʻಶಾಹಿ ಪರಿವಾರದ ಯುವರಾಜʼ ವಾರಣಾಸಿಯ (Varanasi) ಜನರನ್ನು ಅವರ ಸ್ವಂತ ನೆಲದಲ್ಲಿ ಅವಮಾನಿಸಿದ್ದಾರೆ. ತಲೆ ಕೆಟ್ಟವರು ಮಾತ್ರ ನನ್ನ ಜನರನ್ನು ಕುಡುಕರು ಅನ್ನುತ್ತಾರೆ ಎಂದು ರಾಹುಲ್ ಗಾಂಧಿ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದರು.
ಮೋದಿಯನ್ನು ನಿಂಧಿಸುತ್ತಾ ಎರಡು ದಶಕ ಕಳೆದಿದ್ದಾರೆ. ಅದು ಫಲಿಸಲಿಲ್ಲ ಅಂತಾ ಈಗ ತಮ್ಮ ಹತಾಶೆಯುನ್ನು ಉತ್ತರ ಪ್ರದೇಶದ ಜನರ ಮೇಲೆ ತೋರಿಸುತ್ತಿದ್ದಾರೆ. ಇದು ಅವರ ವಾಸ್ತವ. ಕುಟುಂಬ ಆರಾಧಕರು ಯುವಕರ ಪ್ರತಿಭೆಗೆ ಹೀಗೆ ಹೆದರುತ್ತಾರೆ. ಅದೇನೆ ಇರಲಿ ಉತ್ತರ ಪ್ರದೇಶದ ಯುವ ಜನತೆಗೆ I.N.D.I.A ಒಕ್ಕೂಟ ಮಾಡಿದ ಅವಮಾನವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಅಲ್ಲದೇ I.N.D.I.A ಒಕ್ಕೂಟದಲ್ಲಿ ಅಶಾಂತಿಗೆ ಮತ್ತೊಂದು ಕಾರಣವೂ ಇದೆ. ಕಾಶಿ ಮತ್ತು ಅಯೋಧ್ಯೆಗೆ ಹೊಸ ರೂಪ ಬಂದಿರುವುದೇ ಅವರ ಅಶಾಂತಿಗೆ ಕಾರಣ. ಪರಿವಾರವಾದ ಹಾಗೂ ತುಷ್ಟೀಕರಣ ರಾಜಕೀಯದಿಂದಾಗಿ ಉತ್ತರ ಪ್ರದೇಶವು ಹಲವು ದಶಕಗಳಿಂದ ಹಿಂದುಳಿದಿತ್ತು. ಆದರೀಗ ಬದಲಾಗಿದೆ ಎಂದರು.