ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಮೊದಲು ನಾಂದಿ ಹಾಡಿದ ನಾಡಾದ ಕಂಪ್ಲಿಯ ಇತಿಹಾಸವನ್ನು ರಾಜ್ಯದೆಲ್ಲೆಡೆ ಪಸರಿಸಲು ತಾಲೂಕಿನ ಜನರ ಬೇಡಿಕೆಯಂತೆ 2023ರಲ್ಲಿ ಕಂಪ್ಲಿ ಕಲಾರತಿ ಎಂಬ ಹೆಸರಿನಲ್ಲಿ ಉತ್ಸವ ಜರುಗಿದ್ದು ಈ ಬಾರಿ ಉತ್ಸವ ಜರುಗಲಿದೆಯೋ ಇಲ್ಲವೋ ಎಂಬ ಪ್ರಶ್ನೆಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿವೆ.
ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಂಪ್ಲಿ. ಕ್ರಿಶ 8ನೇ ಶತಮಾನದಿಂದ ಐತಿಹಾಸಿಕ ಶ್ರೀಮಂತಿಕೆ ಹೊಂದಿದೆ ಹಾಗೂ 1017 ರಿಂದ 1076ರವರೆಗೆ ರಾಜಧಾನಿಯಾಗಿ ಮೆರೆದಿದೆ. ಈ ಭೂಮಿಯ ಇತಿಹಾಸ ಹಾಗೂ ಕಂಪಿಲರಾಯ ಮತ್ತು ಗಂಡುಗಲಿಕುಮಾರರಾಮರ ಶೌರ್ಯ ಪರಾಕ್ರಮವನ್ನು ರಾಜ್ಯದ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಹಂಪಿ, ಆನೆಗುಂದಿ, ಬಳ್ಳಾರಿ, ಕನಕಗಿರಿ ಉತ್ಸವದ ರೀತಿಯಲ್ಲಿ ಕಂಪ್ಲಿ ಉತ್ಸವವನ್ನು ಆಚರಿಸಬೇಕೆಂಬುದು ತಾಲೂಕಿನ ಜನತೆಯ ಬಹು ವರ್ಷಗಳ ಕನಸಾಗಿತ್ತು.
ಅಲ್ಲದೇ ಈ ಕುರಿತು ಕಂಪ್ಲಿ ಯುವ ಶಕ್ತಿ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು 2018ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರಿಂದ ಹಿಡಿದು ಅನೇಕ ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು.
ಅದರಂತೆ 2023ರ ಫೆ.11 ಹಾಗೂ 12ನೇ ತಾರಿಕಿನಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಶ್ರೀರಾಮುಲು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತದಿಂದ ಅದ್ದೂರಿಯಾಗಿ ಉತ್ಸವವನ್ನು ಆಚರಿಸಲಾಯಿತು. ಅಂದು ಸಚಿವರಾಗಿದ್ದ ಬಿ.ಶ್ರೀರಾಮುಲು ಸೂರ್ಯ ಚಂದ್ರರಿರುವವರೆಗೂ ಉತ್ಸವ ಜರುಗಲಿದೆ ಎಂದು ಭರವಸೆ ನೀಡಿದ್ದರು. ಇನ್ನು ಮುಂದಿನ ಬಾರಿ ಮತ್ತಷ್ಟು ಅದ್ದೂರಿಯಾಗಿ ಉತ್ಸವ ಆಚರಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಸಹ ಭರವಸೆ ನೀಡಿದ್ದರು.
ಫೆ.12 ಸಮೀಪಿಸುತ್ತಿದ್ದು ಉತ್ಸವದ ಬಗ್ಗೆ ಯಾವುದೇ ಮಾತಿಲ್ಲ :
ಬರದ ನಡುವೆಯು ಫೆ.2,3, ಮತ್ತು 4ನೇ ತಾರಿಕಿನಂದು 3 ದಿನಗಳ ಕಾಲ ಹಂಪಿ ಉತ್ಸವ ಅದ್ದೂರಿಯಾಗಿ ಜರುಗಿದೆ. ಇನ್ನೇನು ಫೆ.12ನೇ ತಾರಿಕು ಸಮೀಪಿಸುತ್ತಲಿದೆ ಆದರೆ ತಾಲೂಕಿನಲ್ಲಿ ಉತ್ಸವದ ಆಚರಣೆಯ ಬಗ್ಗೆ ಶಾಸಕರಾಗಲಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಾಗಲಿ ಎಲ್ಲಿಯು ಉತ್ಸವದ ಆಚರಣೆಯ ಕುರಿತು ಚಕಾರ ಎತ್ತುತ್ತಿಲ್ಲ. ಅಂದು ಸಚಿವರಾಗಿದ್ದ ಶ್ರೀರಾಮುಲು ಅವರಂತು ಅಧಿಕಾರದಲ್ಲಿಲ್ಲ. ಇನ್ನು ಎರಡನೇ ಬಾರಿ ಶಾಸಕರಾಗಿರುವ ಜೆ.ಎನ್.ಗಣೇಶ್ ಮುಂದಿನ ಬಾರಿ ಉತ್ಸವವನ್ನು ಮತ್ತಷ್ಟು ಅದ್ದೂರಿಯಾಗಿ ಆಚರಿಸುವ ಕುರಿತು ಭರವಸೆ ನೀಡಿದ್ದರು, ಅಲ್ಲದೇ ಇದೀಗ ಅವರದ್ದೇ ಪಕ್ಷ ಅಧಿಕಾರದಲ್ಲಿದೆ, ಕೊಟ್ಟ ಮಾತಿನಂತೆ ತಮ್ಮ ಸರ್ಕಾರವನ್ನು ಮನವಲಿಸಿ ಉತ್ಸವನ್ನು ನಡೆಸುತ್ತಾರ ಇಲ್ಲವೋ ಎಂಬ ಪ್ರಶ್ನೆಗಳು ಹೆಚ್ಚಾಗಿವೆ.
ಕಂಪ್ಲಿ ಉತ್ಸವ ನಡೆಸಲು ಜನತೆಯಯೊತ್ತಾಯ :
ಐತಿಹಾಸಿಕ ಹಿನ್ನೆಲೆ ಹೊಂದಿರುವಂತಹ ಕಂಪ್ಲಿಯ ಉತ್ಸವವನ್ನು ಮಾಡಿದರೆ ಈ ನೆಲದ ಸೊಗಡಿನ ಬಗ್ಗೆ ರಾಜ್ಯದ ಜನತೆಗೆ ತಿಳಿಸಿದಂತಾಗುತ್ತದೆ ಅಲ್ಲದೇ ಸ್ಥಳೀಯ ಕಲಾವಿದರಿಗೆ ಆರ್ಥಿಕವಾಗಿ ನೆರವಾಗಲಿದೆ. ಭರ ಹಾಗೂ ಗ್ಯಾರೆಂಟಿಯ ಹೊರೆ ಎಂಬ ಯಾವುದೇ ಇಲ್ಲಸಲ್ಲದ ಮಾತುಗಳನ್ನಾಡಿ ಉತ್ಸವವನ್ನು ಆಚರಿಸಿದಂತೆ ತಟಸ್ಥವಾಗದೇ, ಹಂಪಿ ಉತ್ಸವದ ರೀತಿಯಲ್ಲಿ ಕಂಪ್ಲಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರ ಮುಂದಾಗಬೇಕೆಂದು ತಾಲೂಕಿನ ಜನತೆ ಒತ್ತಾಯಿಸಿದ್ದಾರೆ.
ಚನ್ನಕೇಶವ ಕಂಪ್ಲಿ