ಹುಬ್ಬಳ್ಳಿ: ವಸತಿ ಶಾಲೆಗಳ ಪ್ರವೇಶದ್ವಾರದಲ್ಲಿ ಬರೆದಿರುವ ‘ಜ್ಞಾನ ದೇಗುಲವಿದು ಕೈ ಮುಗಿದು ಬಾ ಒಳಗೆ’ ಎನ್ನುವ ಬರಹವನ್ನು ಬದಲಾಯಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ನಗರದ ಅಂಚಟಗೇರಿಯ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ ಮುಂಭಾಗದಲ್ ಪ್ರತಿಭಟನೆ ನಡೆಸಿದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ‘ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ ಜ್ಞಾನಪಿಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಪ್ರೇರಣಾದಾಯಕ ನುಡಿಗಳನ್ನು ಬರೆಯಲಾಗಿದೆ. ಸರ್ಕಾರ ಅದನ್ನು ಬದಲಿಸಿ ‘ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎನ್ನುವ ನುಡಿ ಬರೆಸಲು ಮುಂದಾಗಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಇರಬೇಕು, ಜ್ಞಾನಕ್ಕೆ ಶರಣಾಗುವ ಗುಣವಿರಬೇಕು. ಪ್ರಶ್ನಿಸುವ ಮನೋಭಾವ ಹುಟ್ಟಿಕೊಳ್ಳ ಬೇಕಾದದ್ದು ಕಲಿಕೆಯ ನಂತರ. ಆರಂಭದಲ್ಲಿಯೇ ಪ್ರಶ್ನಿಸುವುದು ಎಂದರೆ ಅಸಂಬದ್ಧ. ಸರ್ಕಾರ ಗೊಂದಲ ಸೃಷ್ಟಿಸಲು ಹೀಗೆ ಮಾಡುತ್ತಿದೆ. ಶಿಕ್ಷಣ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹುನ್ನಾರ ಇದಾಗಿದೆ. ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.ಪೃಥ್ವಿಕುಮಾರ, ಮೌನೇಶ ಗೌಡ, ಸಿದ್ಧಾರ್ಥ, ರಾಘವೇಂದ್ರ, ನಾಗರಾಜ ರಾವ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.