ಹಾವೇರಿ:- ರೈತರ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಎಂದು ಹೇಳಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ಕೊಡುವುದು ಸಮಸ್ಯೆಯಾಗುತ್ತಿದೆ ಎಂದು ರೈತರು ಅರ್ಜಿ ಸಲ್ಲಿಸಿದ್ದಾರೆ. ಎಫ್ಐಆರ್ ಮೇಲೆ ಪರಿಹಾರ ಕೊಡುವ ವ್ಯವಸ್ಥೆ ಮಾಡುವಂತೆ ರೈತ ಸಂಘ ಮನವಿ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮೂರು ತಿಂಗಳಲ್ಲೇ ದಾಖಲೆ ಒದಗಿಸಿ ಕೊಡಲು ಆಗಲ್ಲ, ಪೊಲೀಸರಿಗೆ ಈ ಬಗ್ಗೆ ಹೇಳುತ್ತೇನೆ. ನಾನು ರೈತ, ರೈತರ ಪರವಾಗಿ ಇದ್ದವನು. ರೈತ ಸಂಘದಲ್ಲಿ ಇದ್ದವನು. ರೈತರ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಎಂದು ಹೇಳಲು ಆಗಲ್ಲ. ಬಜೆಟ್ ಮೇಲೆ ರೈತರ ಪರವಾಗಿ ಏನು ಮಾಡಬೇಕೋ ಮಾಡುತ್ತೇನೆ. ಹೊಸ ಬೋರ್ವೆಲ್ಗಳಿಗೆ ವಿದ್ಯುತ್ ಸಂಪರ್ಕ ಕೊಡಲು ಅಧಿಕಾರಿಗಳಿಗೆ ಹೇಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇನ್ನೂ ನಮ್ಮ ವಿರೋಧಿಗಳು ಐದು ಗ್ಯಾರಂಟಿ ಘೋಷಣೆ ಮಾಡಿದಾಗ ರಾಜ್ಯ ದಿವಾಳಿ ಆಗುತ್ತದೆ ಎಂದಿದ್ದರು. ಈಗ ರಾಜ್ಯ ಸುಭದ್ರವಾಗಿದೆ. ಕಳೆದ ಭಾರಿ ಬಜೆಟ್ಗಿಂತ 46 ಸಾವಿರ ಕೋಟಿ ರೂ. ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.