ಚಿಕ್ಕಮಗಳೂರು:- ಕ್ಯಾಬ್ ಚಾಲಕನನ್ನು ಬರ್ಬರವಾಗಿ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಹುಲಿಗೊಂದಿ ಹೊಸೂರು ಗ್ರಾಮದ ಬಳಿ ಜರುಗಿದೆ.
21 ವರ್ಷದ ದರ್ಶನ್ ಮೃತ ರ್ದುದೈವಿ. ಇನ್ನು ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಕೆಲಸ ಮಾಡುತ್ತಿದ್ದ ದರ್ಶನ್, ಹಾಫ್ ಮರ್ಡರ್ ಕೇಸಿನಲ್ಲಿ ಜೈಲು ಸೇರಿದ್ದ. ಇತ್ತೀಚೆಗೆ ಬೇಲ್ ಪಡೆದು ಇಬ್ಬರು ಸ್ನೇಹಿತರ ಜೊತೆ ಕಡೂರಿನ ಮಾಡಾಳು ಗ್ರಾಮದ ತಾತನ ಮನೆಗೆ ಬಂದಿದ್ದ.
ವಾರದ ಹಿಂದೆ ಬೆಂಗಳೂರಿಗೆ ವಾಪಸ್ ಹೋಗಿದ್ದ ಮೃತ ದರ್ಶನ್ ಸ್ನೇಹಿತರು, ನಿನ್ನೆ(ಫೆ.15) ರಾತ್ರಿ ಪುನಃ ಬಂದಿದ್ದಾರೆ. ಈ ಹಿನ್ನಲೆ ಕಾರಿನಲ್ಲಿ ಬಂದ ಸ್ನೇಹಿತರ ಜೊತೆ ದರ್ಶನ್ ಹೋಗಿದ್ದನಂತೆ. ತಾತನಿಗೆ ಫ್ರೆಂಡ್ಸ್ ಬಂದಿದ್ದಾರೆ, ಹೊಲದ ಶೆಡ್ನಲ್ಲಿ ಮಲಗುತ್ತೇನೆ ಎಂದು ಹೇಳಿ ಹೋಗಿದ್ದಾನೆ. ದರ್ಶನ್ ಕಾರಿನಲ್ಲಿ ಹೋಗಿದ್ದನ್ನ ದರ್ಶನ್ ತಾತ ಕೂಡ ನೋಡಿದ್ದರು. ರಾತ್ರಿ ಹೊಲಕ್ಕೆ ಹೋಗಿ ನೋಡಿದಾಗ ಶೆಡ್ನಲ್ಲಿ ದರ್ಶನ್ ಇರಲಿಲ್ಲ. ಸ್ನೇಹಿತರ ಜೊತೆ ಎಲ್ಲೋ ಹೋಗಿರಬಹುದು ಎಂದು ತಾತ ಮನೆಗೆ ಬಂದಿದ್ದರು. ಬೆಳಗ್ಗೆ ಮಾಡಾಳು ಗ್ರಾಮದ ತುಸು ದೂರದಲ್ಲಿ ದರ್ಶನ್ ಮೃತದೇಹ ಪತ್ತೆಯಾಗಿದೆ. ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಯಾವ ವಿಚಾರಕ್ಕೆ, ಯಾರು ಕೊಲೆಗೈದಿದ್ದಾರೆ ಎನ್ನುವುದು ನಿಗೂಢವಾಗಿದೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.