ಬೆಂಗಳೂರು:- ನಾಳೆ 15ನೇ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಲಿದ್ದಾರೆ. ಈ ಹಿನ್ನೆಲೆ ಸಿಎಂ ಅವರು ಇಂದು ಅಂತಿಮ ಕ್ಷಣದ ಸಿದ್ಧತೆ ವೀಕ್ಷಿಸಿದರು.
ಈ ಬಜೆಟ್ ರಾಜ್ಯಕ್ಕೆ ಹೊಸ ದಿಕ್ಸೂಚಿ ಕೊಡಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಜನರು ಅದರಲ್ಲೂ ರೈತರು ತಮಗೇನು ಘೋಷಣೆಯಾಗಲಿದೆ ಎಂದು ಕಾಯುತ್ತಿದ್ದಾರೆ. ಆದರೆ, ಯಾವುದೇ ನಿರೀಕ್ಷೆಗಳಿಲ್ಲ, ಕಿವಿಗೆ ಹೂವು ಗ್ಯಾರಂಟಿ ಎಂದು ವಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ.
ಈವರೆಗೂ ರಾಜ್ಯದ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ದಾಟಿರಲಿಲ್ಲ. ಆದರೆ, ಈ ಬಾರಿ ಸುಮಾರು 50 ಸಾವಿರ ಕೋಟಿ ರೂಪಾಯಿ ಹೆಚ್ಚಳವಾಗಲಿದೆ. ಇದರೊಂದಿಗೆ ಈ ಬಾರಿ ಬಜೆಟ್ ಗಾತ್ರ 3.80 ಲಕ್ಷ ಕೋಟಿ ರೂಪಾಯಿ ತಲುಪುವ ನಿರೀಕ್ಷೆಯಿದೆ. ಪಂಚ ಗ್ಯಾರಂಟಿ ಹೊರೆ ಹಾಗೂ ಬರದ ಬರೆ ಸರ್ಕಾರಕ್ಕೆ ಸವಾಲಾಗಿದೆ. ಪ್ರಸಕ್ತ ವರ್ಷದಲ್ಲಿ ರಾಜಸ್ವ ಸಂಗ್ರಹ ನಿಗದಿತ ಗುರಿ ತಲುಪದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
2024-25 ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಸಮಾರು 58,000 ಕೋಟಿ ರೂ. ಅನುದಾನ ಮೀಸಲಿಡುವ ಅನಿವಾರ್ಯತೆ ಇದೆ. ಹೀಗಾಗಿ ಗ್ಯಾರಂಟಿ ವೆಚ್ಚದ ಮಧ್ಯೆ ಅಭಿವೃದ್ಧಿಗೆ ವೇಗ ಕೊಡುವ ಸಮತೋಲಿತ ಬಜೆಟ್ ಮಂಡಿಸಬೇಕಿದೆ. ಆದ್ರೂ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಜನತೆಗೆ ಒಂದಷ್ಟು ಬಂಪರ್ ಕೊಡುವೆ ಕೊಡುವ ನಿರೀಕ್ಷೆ ಹೊಂದಲಾಗಿದೆ
ನಾಳಿನ ಬಜೆಟ್ ಕರ್ನಾಟಕ ರಾಜ್ಯಕ್ಕೆ ಹೊಸ ದಿಕ್ಸೂಚಿ ಕೊಡಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಶಕ್ತಿ ತುಂಬಲು ಕಾರ್ಯಕ್ರಮವನ್ನ ರೂಪಿಸಿದ್ದೇವೆ. ಅನೇಕ ಹೊಸ ಕಾರ್ಯಕ್ರಮ ಜಾರಿ ಮಾಡುತ್ತೇವೆ. ಗ್ಯಾರಂಟಿ ಯೋಜನೆ ಹೊರತಾಗಿ ನೀರಾವರಿಗೆ ಚಿಂತನೆ ಮಾಡಲಾಗಿದೆ. ಬಜೆಟ್ ಕುರಿತು ಏನೂ ಹೇಳುವುದಕ್ಕೆ ಬರಲ್ಲ, ನಾಳೆ ಗೊತ್ತಾಗುತ್ತದೆ ಎಂದರು.