ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯದಲ್ಲಿ ಪತ್ನಿ ರೀಲ್ಸ್ನಿಂದ ಬೇಸತ್ತು ಪತಿ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ.
ಕುಮಾರ್ (33) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕುಮಾರ್ ಪತ್ನಿ ರೂಪಾ ಗುಂಡಾಲ್ ಜಲಾಶಯಕ್ಕೆ ಹೋಗಿದ್ದ ವೇಳೆ ಸೋದರ ಮಾವ ಗೋವಿಂದ ಹಾಗೂ ಸಹೋದರಿ ದೀಪಾ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದರು
ಈ ರೀಲ್ಸ್ ಗೂ ಮುನ್ನಾ ಪತಿ ಕುಮಾರ್ ಹಾಗೂ ಪತ್ನಿ ರೂಪಾ ನಡುವೆ ಹಲವು ಬಾರಿ ಕೌಟುಂಬಿಕ ಕಲಹ ನಡೆದಿತ್ತು. ರೀಲ್ಸ್ ಮಾಡದಂತೆ ಹಲವು ಸಲ ಎಚ್ಚರಿಕೆ ಕೂಡ ನೀಡಿದ್ದರು. ಆದರೆ ಇದನ್ನೂ ಲೆಕ್ಕಿಸದೆ ರೂಪಾ ರೀಲ್ಸ್ ಮಾಡಿದ್ದರು. ರೂಪಾ ರೀಲ್ಸ್ ನೋಡಿದ್ದ ಕುಮಾರ್ ಸ್ನೇಹಿತರು ರೇಗಿಸಿದ್ದರು. ಇದರಿಂದ ಮನಸ್ಸಿಗೆ ಕುಮಾರ್ ಬೇಸರಗೊಂಡಿದ್ದರು. ಪತ್ನಿಯ ಬಳಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಕೂಡ ಮಾಡಿಕೊಂಡಿದ್ದರಂತೆ. ಪತ್ನಿ ರೂಪಾ ಕುಮಾರ್ ಮಾತಿಗೆ ಸೊಪ್ಪು ಹಾಕಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಮಾರ್ ಕುಟುಂಬಸ್ಥರು ರೂಪಾ, ಯಶೋದಾ, ಗೋವಿಂದ ಮೂವರ ಮೇಲೂ ದೂರು ಕೊಟ್ಟಿದ್ದಾರೆ. ಮೂವರು ನಮ್ಮ ಅಣ್ಣನ ಸಾವಿಗೆ ಕಾರಣರಾಗಿದ್ದು, ಪ್ರಕರಣ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಿಂದೆಯೂ ಕೂಡ ರೂಪಾ ಹಾಗೂ ಕುಮಾರ್ ನಡುವೆ ಕಲಹ ನಡೆದಿತ್ತು. ಆ ವೇಳೆಯೂ ಆತ್ಮಹತ್ಯೆಗೆ ಯತ್ನಿಸಿದ್ದನು. ನಂತರ ಎಲ್ಲಾ ಸೇರಿ ಬಿಡಿಸಿದ್ದೇವು. ಈಗ ಮತ್ತೆ ರೀಲ್ಸ್ ಹಾಗೂ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಮನನೊಂದು ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರು ಕೊಟ್ಟಿದ್ದಾರೆ.