ನವದೆಹಲಿ: ಅನಾರೋಗ್ಯ ಕಾರಣದಿಂದ ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಘೋಷಿಸಿದ್ದಾರೆ. ರಾಜಸ್ಥಾನದಿಂದ ಬುಧವಾರ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿದ್ದಾರೆ. ಈ ಬೆಳವಣಿಗೆಯ ಒಂದು ದಿನದ ನಂತರ ಲೋಕಸಭೆಗೆ (Lok Sabha Elections) ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ್ದಾರೆ.
ಈ ಕುರಿತು ಅಧಿಕೃತ ಪ್ರಕಟಣೆ ಹಂಚಿಕೊಂಡಿರುವ ಅವರು, ಹೆಚ್ಚುತ್ತಿರುವ ವಯಸ್ಸಿನ ಕಾರಣ ಹಾಗೂ ಅನಾರೋಗ್ಯದಿಂದಾಗಿ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಈ ನಿರ್ಧಾರದ ನಂತರ, ನೇರವಾಗಿ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಸಿಗುವುದಿಲ್ಲ. ಆದ್ರೆ ಖಂಡಿತವಾಗಿಯೂ, ನನ್ನ ಹೃದಯ ಮತ್ತು ಆತ್ಮ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಎಂದೆ ಎಂದು ಭಾವುಕರಾಗಿದ್ದಾರೆ.
CPP चेयरपर्सन श्रीमती सोनिया गांधी जी का रायबरेली की जनता के नाम संदेश- pic.twitter.com/6zlJkWjwvi
— Congress (@INCIndia) February 15, 2024
ರಾಯ್ ಬರೇಲಿ ಕ್ಷೇತ್ರದ ಜನರೊಂದಿಗಿನ ಅವಿನಾಭಾವ ಸಂಬಂಧ ಬಹಳ ಹಳೆಯದ್ದು. ರಾಯ್ ಬರೇಲಿಯೊಂದಿಗೆ ನಮ್ಮ ಕುಟುಂಬದ ಸಂಬಂಧಗಳು ತುಂಬಾ ಆಳವಾಗಿವೆ. ಸ್ವಾತಂತ್ರ್ಯಾ ನಂತರ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಫಿರೋಜ್ ಗಾಂಧಿ ಅವರನ್ನು ಕ್ಷೇತ್ರದ ಜನ ಗೆಲ್ಲಿಸಿದ್ದರು. ನಂತರ ಇಂದಿರಾ ಗಾಂಧಿ ಅವರನ್ನು ಗೆಲ್ಲಿಸಿದರು. ಅಲ್ಲಿಂದ, ಇಲ್ಲಿಯವೆರೆಗೆ ಇಲ್ಲಿನ ಜನರ ಪ್ರೀತಿ, ವಿಶ್ವಾಸ, ನಂಬಿಕೆ ಬಲವಾಗಿದೆ ಎಂದು ಸೋನಿಯಾ ಗಾಂಧಿ ಸ್ಮರಿಸಿದ್ದಾರೆ.
ಈ ಪ್ರಕಾಶಮಾನ ಹಾದಿಯಲ್ಲಿ ನಡೆಯಲು ನೀವು ನನಗೆ ಜಾಗ ಕೊಟ್ಟಿದ್ದೀರಿ. ನನ್ನ ಜೀವನ ಸಂಗಾತಿಯನ್ನು ಶಾಶ್ವತವಾಗಿ ಕಳೆದುಕೊಂಡ ನಂತರ, ನಿಮ್ಮ ಬಳಿಗೆ ಬಂದೆ, ಆಗ ನೀವು ಪ್ರೀತಿಯ ಅಪ್ಪುಗೆ ನೀಡಿದಿರಿ. ಕಳೆದೆರಡು ಚುನಾವಣೆಗಳಲ್ಲಿ ಕಷ್ಟದ ಸಂದರ್ಭದಲ್ಲೂ ಬಂಡೆಯಂತೆ ನಿಂತೆ. ಇದನ್ನು ಮರೆಯಲು ಸಾಧ್ಯವೇ ಇಲ್ಲ, ಇಂದು ನಾನು ಏನಾಗಿದ್ದರೂ ನಿಮ್ಮಿಂದಲೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಈ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇನೆ ಎಂದು ಭಾವುರಾಗಿ ಪತ್ರದಲ್ಲಿ ಬರೆದಿದ್ದಾರೆ.
ಬುಧವಾರ ಜೈಪುರದಲ್ಲಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗಿದ್ದರು. ಇದೇ ವೇಳೆ ಇಂದಿರಾ ಗಾಂಧಿ ಅವರು 1999 ರಲ್ಲಿ ಅಮೇಥಿಯಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಂಸತ್ ರಾಜಕೀಯ ಪ್ರವೇಶಿಸಿದ್ದರು. ಆ ನಂತರ ನಿರಂತರ ಕಾರ್ಯಚಟುವಟಿಕೆಗಳಿಂದ ವಿರೋಧ ಪಕ್ಷದ ನಾಯಕಿಯಾದರು.
2004ರ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಫಿರೋಜ್ ಗಾಂಧಿ ಅವರು 1952, 1957ರಲ್ಲಿ ರಾಯ್ ಬರೇಲಿಯಿಂದ ಎರಡು ಬಾರಿ ಜಯಗಳಿಸಿದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರ ಅವರ ಮೊಮ್ಮಗ ಅರುಣ್ ನೆಹರು ಅವರು 1980ರ ಉಪಚುನಾವಣೆ ಮತ್ತು 1984ರ ಚುನಾವಣೆಯಲ್ಲಿ, ನೆಹರು ನಾದಿನಿ ಶೀಲಾ ಕೌಲ್ 1989, 1991ರಲ್ಲಿ ಗೆದ್ದಿದ್ದರು ಎಂಬುದನ್ನು ಸೋನಿಯಾ ಗಾಂಧಿ ಸ್ಮರಿಸಿದ್ದಾರೆ.