ಬೆಂಗಳೂರು:- ರಾಜ್ಯ ಬಿಜೆಪಿ ಘಟಕವೂ ಕನ್ನಡಿಗರಿಗೆ ಹೂವಿಟ್ಟಿದ್ದು ಸಾಕು ಎಂಬ ಸರ್ಕಾರದ ವಿರುದ್ಧ ಲೆಕ್ಕ ಕೊಡಿ ಅಭಿಯಾನ ಹಮ್ಮಿಕೊಂಡಿದೆ
ಕನ್ನಡಿಗರಿಗೆ ಹೂವಿಟ್ಟಿದ್ದು ಸಾಕು, ಲೆಕ್ಕ ಕೊಡಿ ಎಂಬ ಅಭಿಯಾನವನ್ನು ಬಿಜೆಪಿ ಆರಂಭಿಸಿದೆ. ರಾಜ್ಯ ಸರ್ಕಾರದ ಹಲವು ಘೋಷಣೆಗಳನ್ನು ಉಲ್ಲೇಖಿಸಿ ಸುಳ್ಳು ಹೇಳುವ ಬದಲು ನಿಜವಾದ ಲೆಕ್ಕ ಕೊಡಿ ಎಂದು ಕೇಳಿದ್ದಾರೆ.
ಎಕ್ಸ್ನಲ್ಲಿ ಮೂರು ಪೋಸ್ಟ್ಗಳನ್ನು ಹಾಕಿರುವ ಬಿಜೆಪಿ ರೈತರಿಗೆ, ಮಹಿಳೆಯರಿಗೆ ಪ್ರಣಾಳಿಕೆಯಲ್ಲಿ ಘೋಷಿಸಿದ ಕಾರ್ಯಕ್ರಮಗಳು ಏನಾದವು? ಅವುಗಳ ಬಗ್ಗೆ ಸರಿಯಾದ ಮಾಹಿತಿ ಕೊಡಿ ಎಂದು ಕೇಳಿದೆ.
ಸಿಎಂ ಸಿದ್ದರಾಮಯ್ಯನವರೇ, ಯುವಕರಿಗೆ, ಶ್ರಮಿಕರಿಗೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ನೀವು ನೀಡಿದ ಆಶ್ವಾಸನೆಗಳೆಲ್ಲವೂ ಆಶ್ವಾಸನೆಯಾಗಿಯೇ ಉಳಿದಿವೆ. ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳಿನ ಜಾಹಿರಾತು ನೀಡುವ ಬದಲು, ಜನರಿಗೆ ನೀವು ಖರ್ಚು ಮಾಡಿದ ಹಣದ ಬಗ್ಗೆ ಲೆಕ್ಕ ನೀಡಿ.
ಸಿದ್ದರಾಮಯ್ಯ ಅವರೇ, ದಲಿತ-ಹಿಂದುಳಿದ ಸಮುದಾಯಗಳಿಗೆ, ಮಹಿಳೆಯರಿಗೆ, ಮಕ್ಕಳಿಗೆ ನೀವು ಚುನಾವಣಾಪೂರ್ವ ನೀಡಿದ ಭರವಸೆಗಳೆಲ್ಲವೂ ಬರೀ ಬೋಗಸ್ ಎಂದು ಸಾಬೀತಾಗಿದೆ. ಸುಳ್ಳು ಹೇಳಿದ್ದು ಸಾಕು, ಜನತೆಗೆ ಅಸಲಿ ಲೆಕ್ಕ ನೀಡಲೇಬೇಕು.
ಸರ್ಕಾರದ ಪ್ರತಿಯೊಂದು ಯೋಜನೆಯನ್ನೂ ಪ್ರಶ್ನಿಸಿರುವ ಬಿಜೆಪಿ, ಕಾಂಗ್ರೆಸ್ ಹೇಳುತ್ತಿರುವುದೆಲ್ಲವೂ ಸುಳ್ಳು ಎಂದು ಪ್ರತಿಪಾದಿಸಿದೆ. ಹೀಗಾಗಿ ಲೆಕ್ಕ ಕೊಡಿ ಎಂದು ಕೇಳಿದೆ. ಬಿಜೆಪಿಯ ಈ ಅಭಿಯಾನಕ್ಕೆ ಟ್ವಿಟರ್ನಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಕೆಲವರು ಕಾಂಗ್ರೆಸ್ನ್ನು ತರಾಟೆಗೆ ತೆಗೆದುಕೊಂಡಿದ್ದರೆ, ಇನ್ನು ಕೆಲವರು ನಿಮಗೆ ಲೆಕ್ಕ ಕೇಳುವ ನೈತಿಕತೆ ಇಲ್ಲ ಎಂದಿದ್ದಾರೆ.