ಬೆಂಗಳೂರು:- ಹಸಿರು ಶಾಲನ್ನು ದೇಶಕ್ಕೆ ವಿಸ್ತರಿಸಿದ್ದು ಕರ್ನಾಟಕ ಎಂದು ರಾಕೇಶ್ ಟಿಕಾಯತ್ ಅಭಿನಂದನೆ ಸಲ್ಲಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಂಟಿಯಾಗಿ ಆಯೋಜಿಸಿದ್ದ ‘ನಮ್ಮ ಎಂಡಿಎನ್’ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ 88ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಎಲ್ಲ ಹೋರಾಟಗಳಿಗೆ ಪ್ರೇರಣೆ ನೀಡುವ ನೆಲ ಕರ್ನಾಟಕ. ಮೊದಲಿಗೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಬಳಕೆಯಲ್ಲಿದ್ದ ರೈತರ ಹಸಿರು ಶಾಲುಗಳು ಇಂದು ದೇಶಾದ್ಯಂತ ವಿಸ್ತರಿಸಿವೆ. ರೈತ ಹೋರಾಟದ ಪ್ರಮುಖ ಲಾಂಛನವಾಗಿ ಬಳಕೆಯಾಗುತ್ತಿರುವ ಹಸಿರು ಶಾಲನ್ನು ದೇಶಕ್ಕೆ ನೀಡಿದ್ದು ಕರ್ನಾಟಕ. ಕರ್ನಾಟಕದಲ್ಲಿ ಹಸಿರು ಪ್ರಜ್ಞೆಯ್ನನು (ರೈತ ಹೋರಾಟ) ಜಾಗೃತಗೊಳಿಸಿದ ಶ್ರೇಯಸ್ಸು ರೈತಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರಿಗೆ ಸಲ್ಲುತ್ತದೆ. ಆ ಕಾರಣಕ್ಕೆ ದೇಶದ ರೈತ ಸಮುದಾಯದ ಪರವಾಗಿ ನಂಜುಂಡಸ್ವಾಮಿಯವರಿಗೆ ಮತ್ತು ಕರ್ನಾಟಕಕ್ಕೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ ಎಂದು ಟಿಕಾಯತ್ ತಿಳಿಸಿದರು.
ರೈತ ವಿರೋಧಿ ಬಹುರಾಷ್ಟ್ರೀಯ ಕಂಪನಿ ಪಾಲಿಸಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದ ನಂಜುಂಡಸ್ವಾಮಿಯವರು ಆ ಕಾಲದಲ್ಲೇ ರೈತರ ಪರವಾಗಿ ಹೋರಾಟ ಆರಂಭಿಸಿದ್ದರು. ಹಿಂದಿ ಭಾಷೆ ಬರದೇ ಇದ್ದರೂ ದಕ್ಷಿಣ ಮತ್ತು ಉತ್ತರ ಭಾರತದ ರೈತ ಮುಖಂಡರನ್ನು ಹಾಗೂ ರೈತ ಸಂಘಟನೆಗಳನ್ನು ಒಗ್ಗೂಡಿಸಿ ರೈತ ಸಮುದಾಯಕ್ಕೆ ಬಲ ತಂದುಕೊಟ್ಟಿದ್ದರು. ಆ ಬಲದ ಪ್ರತಿಲವೇ ದಿಲ್ಲಿಯಲ್ಲಿ 13 ತಿಂಗಳು ನಡೆದ ಹೋರಾಟ ಮತ್ತು ಅದರಿಂದ ಕೇಂದ್ರ ಸರ್ಕಾರ ರೈತವಿರೋಧಿ ಕಾನೂನು ಹಿಂಪಡೆಯಲು ಸಾಧ್ಯವಾಯಿತು.
ಆ ರೈತಹೋರಾಟದ ಗೆಲುವಿನ ಶ್ರೇಯಸ್ಸು ಎಂಡಿಎನ್ ಅವರಿಗೆ ಸಲ್ಲಬೇಕು ಎಂದು ಟಿಕಾಯತ್ ಪ್ರೊ.ನಂಜುಂಡಸ್ವಾಮಿಯವರೊಂದಿಗಿನ ಹೋರಾಟದ ಒಡನಾಟವನ್ನು ನೆನಪಿಸಿಕೊಂಡರು.
ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ದಿಲ್ಲಿಯಲ್ಲಿ ನಡೆಯಲಿರುವ ಹೋರಾಟಕ್ಕೆ ತೆರಳುತ್ತಿದ್ದ ರೈತರನ್ನು ಅಲ್ಲಲ್ಲಿ ಬಂಧಿಸುವ ಕಾರ್ಯ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ಕರ್ನಾಟಕದ ರೈತರನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಇದನ್ನು ಖಂಡಿಸಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು. ಯಾವುದೇ ಕೇಂದ್ರ ನಾಯಕರ ರಾಜ್ಯಕ್ಕೆ ಬಂದಾಗ ಅವರ ವಿರುದ್ಧ ರೈತರು ಕಪ್ಪು ಭಾವುಟ ಪ್ರದರ್ಶಿಸಿ ಎಂದರು