ಶಿವಮೊಗ್ಗ:- ಇಲ್ಲಿನ ತೀರ್ಥಹಳ್ಳಿಯಲ್ಲಿ ಒಂದೇ ದಿನ 6 ಜನರಿಗೆ ಮಂಗನ ಕಾಯಿಲೆ ಬಂದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. 6 ಮಂದಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ರೋಗಿಗಳ ಸಂಪರ್ಕಕ್ಕೆ ಬಂದ 42 ಜನರ ರಕ್ತ ತಪಾಸಣೆ ಮಾಡಲಾಗಿದೆ. ತಾಲೂಕು ಆಸ್ಪತ್ರೆಗೆ ಜಿಲ್ಲಾ ವೈದ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ ಭೇಟಿ ನೀಡಿ, ಪಾಸಿಟಿಟ್ ಬಂದ ಆರು ರೋಗಿಗಳ ಆರೋಗ್ಯ ವಿಚಾರಿಸಿದರು. “ಆತಂಕ ಪಡುವ ಅಗತ್ಯವಿಲ್ಲ. ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಧೈರ್ಯದಿಂದ ಇರಿ” ಎಂದು ರೋಗಿಗಳಿಗೆ ಧೈರ್ಯ ತುಂಬಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 32 ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಅಂದರೆ ಫೆ.08ರ ವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂಬತ್ತು ಜನರು ಮಂಗನ ಕಾಯಿಲೆಯಿಂದ ಬಳಲುತ್ತಿದ್ದರು. ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಒಂಬತ್ತು ಮಂಗನ ಕಾಯಿಲೆ ಪ್ರಕರಣಗಳ ಪೈಕಿ ಓರ್ವ ಸೋಂಕಿತ ಮೃತಪಟ್ಟಿದ್ದರು. ಇನ್ನು ಇಲ್ಲಿ ಪತ್ತೆಯಾದ ಮಂಗನ ಕಾಯಿಲೆ ಪ್ರಕರಣಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಒಎಲ್ವಿ ಎಸ್ಟೇಟ್ ಭಾಗದಲ್ಲಿ ಪತ್ತೆಯಾಗಿವೆ. ಈ ಒಎಲ್ವಿ ಎಸ್ಟೇಟ್ ಕೊಪ್ಪ ತಾಲೂಕಿನಲ್ಲಿ ಇದೆ. ಹೀಗಾಗಿ ಆರೋಗ್ಯ ಇಲಾಖೆಯು ತಾಲೂಕಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಫ್ಡಿ ವಾರ್ಡ್ ತೆರೆದಿದೆ