ಮನೆಯ ಮುಂದೆ ಸುಂದರವಾಗಿ ರಂಗೋಲಿ ಬಿಡಿಸುವುದರಿಂದ ಮನೆಯ ಅಂದ ಇನ್ನೂ ಹೆಚ್ಚುತ್ತದೆ. ರಂಗೋಲಿ ಹಾಕುವುದರಿಂದ ನಕಾರಾತ್ಮ ಶಕ್ತಿಗಳು ಮನೆಯೊಳಗೆ ಬರುವುದಿಲ್ಲ ಎಂಬುವುದು ನಂಬಿಕೆ. ರಂಗೋಲಿಯನ್ನು ಹಾಕುವ ದೊಡ್ಡ ಪ್ರಯೋಜನವೆಂದರೆ ಅದನ್ನು ಹಾಕುವಾಗ ನೀವು ತುಂಬಾ ಸಕಾರಾತ್ಮಕ ಭಾವನೆಯನ್ನು ಅನುಭವಿಸುತ್ತೀರಿ ಮತ್ತು ಈ ಪ್ರಕ್ರಿಯೆಯು ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ಮತ್ತು ತಾಳ್ಮೆ ವೃದ್ಧಿಸುತ್ತದೆ. ಹಬ್ಬ, ಮದುವೆ, ವ್ರತ, ಉಪನಯನ, ರಥೋತ್ಸವಗಳಲ್ಲಿ ತಳಿರು ತೋರಣಗಳು ಹಾಗೂ ರಂಗೋಲಿ ಹಿಂದೂ ಧರ್ಮದಲ್ಲಿ ಅವಿಚ್ಛಿನ್ನ ಅಂಗಗಳಾಗಿವೆ. ರಂಗೋಲಿ ಶುಭದ ಸಂಕೇತ
ಹೀಗಾಗಿ ಇದನ್ನು ವ್ಯಕ್ತಿ ಮೃತಪಟ್ಟಾಗ ಆತನ ಪುಣ್ಯಕಾರ್ಯ ಮುಗಿಯುವವರೆಗೆ ಹಾಕುವಂತಿಲ್ಲ. ಕಪ್ಪುಬಣ್ಣ ಬಳಸಿ ರಂಗೋಲಿ ಹಾಕುವುದು ನಿಷಿದ್ಧ. ರಂಗೋಲಿ ದಾಟಿ ಭೂತ, ಪ್ರೇತಗಳು ಮನೆಯೊಳಗೆ ಪ್ರವೇಶಿಸುವುದಿಲ್ಲವೆಂಬ ನಂಬಿಕೆ ಇದೆ. ರಂಗೋಲಿ ತುಳಿಯುವುದು ನಿಷಿದ್ಧ. ರಂಗವಲ್ಲಿಯನ್ನು ಸೂರ್ಯೋದಯಕ್ಕೆ ಮುಂಚೆ ಹಾಕಬೇಕು. ಒಂದು ಎಳೆಯಿಂದ ರಂಗೋಲಿ ಹಾಕಬಾರದು. ಕನಿಷ್ಠ ಪಕ್ಷ ಎರಡು ಎಳೆಗಳಾದರೂ ಇರಬೇಕು ಅಥವಾ ಸಮಸಂಖ್ಯೆಯಲ್ಲಿ ಗೀರುಗಳನ್ನು ಹಾಕಿ ರಂಗೋಲಿ ಬಿಡಿಸಬೇಕು, ಮನೆಯ ಮುಂದೆ ಬಾಗಿಲಿನ ಮಧ್ಯದಲ್ಲಿ ರಂಗವಲ್ಲಿ ಹಾಕಬೇಕು ಎಂಬ ನಿಯಮಗಳಿವೆ. ಅದರಂತೆ ನಾವು ರಂಗೋಲಿ ಹಾಕಬೇಕು.
ಇತ್ತೀಚಿನ ದಿನಗಳಲ್ಲಿ ಮನೆ ಮುಂದೆ ರಂಗೋಲಿ ಮಾಯವಾಗುತ್ತಿವೆ. ಕಾರಣ ಬದಲಾದ ಜೀವನ ಶೈಲಿ, ಸೋಂಬೇರಿತನ, ಬೆಳಿಗ್ಗೆ ತಡವಾಗಿ ಎದ್ದೇಳುವುದು ಎಂಬಿತ್ಯಾದಿ ಕಾರಣಗಳು ಆಗಿದೆ.