ಚಿಕ್ಕಬಳ್ಳಾಪುರ:- ರಾಜ್ಯ ಸರ್ಕಾರ ರೈತ, ಬಡವರ, ದಲಿತರ ವಿರೋಧಿ ಸರ್ಕಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ಈ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ 60 ವರ್ಷಗಳ ಕಾಲ ಕಾಂಗ್ರೆಸ್ (Congress) ಸರ್ಕಾರ ಆಡಳಿತ ಮಾಡಿದೆ. ಅವರಿಗೆ ರೈತರ ಪರವಾಗಿ ಉತ್ತಮ ಆಡಳಿತ ನೀಡಬೇಕು ಎಂದು ಯಾವತ್ತೂ ಅನ್ನಿಸಲೇ ಇಲ್ಲ ಎಂದರು.
ರಾಜ್ಯ ಸರ್ಕಾರ ರೈತ, ಬಡವರ, ದಲಿತರ ವಿರೋಧಿ ಸರ್ಕಾರವಾಗಿದೆ. ದೇಶದಲ್ಲಿ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಯಡಿಯೂರಪ್ಪನವರು. ರೈತರಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದರು. ಕಾಂಗ್ರೆಸ್ನವರು ರೈತರ ಪರ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದವರು, ಹೈನುಗಾರರಿಗೆ ಪ್ರೋತ್ಸಾಹ ಧನ ನೀಡಿದವರು ಯಡಿಯೂರಪ್ಪನವರು. ಕಾಂಗ್ರೆಸ್ನವರ ಯೋಗ್ಯತೆಗೆ ಪ್ರೋತ್ಸಾಹ ಧನ ಕೊಡಲು ಆಗುತ್ತಿಲ್ಲ. ಈ ಸರ್ಕಾರ ಯಾವಾಗ ತೊಲಗುತ್ತದೆಯೋ ಎಂದು ಜನ ಶಾಪ ಹಾಕುತ್ತಿದ್ದಾರೆ. 9 ತಿಂಗಳಾದರೂ ಅಭಿವೃದ್ಧಿ ಮಾಡದ ಶೂನ್ಯ ಸರ್ಕಾರ ಇದು. ಈ ಅವಧಿಯಲ್ಲಿ ಜನಪ್ರಿಯತೆ ಕಳೆದುಕೊಂಡಿರುವ ಏಕೈಕ ಸರ್ಕಾರ ಇದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರ ರೈತರಿಗೆ ವಿದ್ಯುತ್ ಕೊಟ್ಟಿದ್ದರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಬಸ್ಸಿನ ವ್ಯವಸ್ಥೆ ಇಲ್ಲದೇ ಶಾಲಾ-ಕಾಲೇಜುಗಳಿಗೆ ಮಕ್ಕಳು ಹೋಗಲು ಆಗುತ್ತಿಲ್ಲ. ತೆರಿಗೆ ಹೆಚ್ಚಳ ಮಾಡೋದು ಬಿಟ್ಟರೆ, ಅಭಿವೃದ್ಧಿ ಮಾಡುವ ಚಿಂತನೆ ಈ ಸರ್ಕಾರಕ್ಕೆ ಇಲ್ಲ. ಇಡೀ ರಾಜ್ಯದಲ್ಲಿ ಎಲ್ಲಿ ಹೋದರೂ ಬಡವರು, ರೈತರು ಹಾಗೂ ದಲಿತರು ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕ್ತಿದ್ದಾರೆ. ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.