ತುಮಕೂರು:- ಮಾರಕಾಸ್ತ್ರಗಳಿಂದ ಕೊಚ್ಚಿ ಅತಿಥಿ ಶಿಕ್ಷಕನ ಭೀಕರ ಕೊಲೆ ನಡೆದಿರುವ ಘಟನೆ ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಜರುಗಿದೆ. 47 ವರ್ಷದ ಮರಿಯಪ್ಪ ಕೊಲೆಯಾದ ಅತಿಥಿ ಶಿಕ್ಷಕ ಎನ್ನಲಾಗಿದೆ.
ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿಯ ಕುಳ್ಳಿನಂಜಯ್ಯಪಾಳ್ಯದ ನಿವಾಸಿಯಾಗಿದ್ದ ಮರಿಯಪ್ಪ, ಮೋದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಇಂದು ಬೆಳಗ್ಗಿನಜಾವ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೈ ಕತ್ತರಿಸಿ ಕೊಲೆ ಮಾಡಿದ್ದಾರೆ.
ತಲೆಭಾಗಕ್ಕೆ ಬಲವಾಗಿ ಹೊಡೆದು ಭೀಕರ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಎಎಸ್ ಪಿ ಮರಿಯಪ್ಪ, ಕುಣಿಗಲ್ ಡಿವೈಎಸ್ ಪಿ ಓಂಪ್ರಕಾಶ್ ಹಾಗೂ ಇನ್ಸ್ಪೆಕ್ಟರ್ ನವೀನ್ ಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಣಿಗಲ್ ಪೊಲೀಸರಿಂದ ತನಿಖೆ ಮುಂದುವರಿದಿದೆ.