ಬೆಂಗಳೂರು:- ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ವರ್ಷದ ಬಾಲಕನೊರ್ವ ನಾಪತ್ತೆಯಾಗಿದ್ದು, ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಸಿದ್ದರಾಮಪ್ಪ ಎಂಬ ಬಾಲಕ ತನ್ನ ಸ್ನೇಹಿತರೊಟ್ಟಿಗೆ ಮನೆಯ ಮುಂದೆ ಆಟವಾಡುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ರಾತ್ರಿ ಕಳೆದರೂ ಮನೆಗೆ ಬಾರದೇ ಇದ್ದಾಗ ಪೋಷಕರು ಹುಡುಕಾಡಿದ್ದಾರೆ. ಆದರೆ ಹುಡುಕಿ ಸುಸ್ತಾದರೆ ವಿನಃ, ಮಗನ ಸುಳಿವು ಮಾತ್ರ ಸಿಕ್ಕಿಲ್ಲ. ನಮ್ಮ ಮಗನನ್ನು ಹುಡುಕಿ ಕೊಡಿ ಎಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿರುವ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ತಾರಮ್ಮ ಹಾಗೂ ಭೀಮ್ಸಪ್ಪ ದಂಪತಿಯ ಪುತ್ರ ಸಿದ್ದರಾಮಪ್ಪ (10). ಯಾದಗಿರಿ ಮೂಲದ ಈ ದಂಪತಿ ಬೆಂಗಳೂರಲ್ಲಿ ಬಂದು ಗಾರೆ ಕೆಲಸ ಮಾಡಿ ಜೀವನದ ಬಂಡಿ ಸಾಗಿಸುತ್ತಿದ್ದರು. ಊರಲ್ಲಿ ಓದುತ್ತಿದ್ದ ಸಿದ್ದರಾಮಪ್ಪನನ್ನು ಕರೆತಂದು ಜತೆಗೆ ಇಟ್ಟುಕೊಂಡಿದ್ದರು. ಊರಿನ ಶಾಲೆಯಲ್ಲಿ ಟಿಸಿ ಕೊಡಲಿಲ್ಲ ಎಂದು ಬೆಂಗಳೂರಿನಲ್ಲಿ ಶಾಲೆಗೆ ಸೇರಿಸದೇ ಮನೆಯಲ್ಲಿಯೇ ಇರಿಸಿದ್ದರು.
ಕಳೆದ ಜನವರಿ 24ರ ಸಂಜೆ 6.30ಕ್ಕೆ ಮಕ್ಕಳ ಜತೆಗೆ ಆಟವಾಡುತ್ತಿದ್ದ ಸಿದ್ದರಾಮಪ್ಪ ಏಕಾಏಕಿ ಕಾಣೆಯಾಗಿದ್ದಾನೆ. ಎಲ್ಲಿ ಹೋಗಿದ್ದನೋ ಎಂದು ತಿಳಿಯದೇ ಪೋಷಕರು ಕಂಗಲಾಗಿದ್ದಾರೆ. ಘಟನೆಗೆ ಸಂಬಂಧ ಪಟ್ಟಂತೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ಕೂಡ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದು, ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕುಟುಂಬಸ್ಥರು ಸಾಥ್ ನೀಡಿದ್ದಾರೆ.