ಹಾಸನ:- ಕೇಂದ್ರ ಸರ್ಕಾರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ಸಜ್ಜಾಗಿದೆ.
ಅನುದಾನ ಹಂಚಿಕೆ ವಿಚಾರವಾಗಿ ಸದ್ಯ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಪ್ರತಿಭಟನೆಗೆ ಸಜ್ಜಾಗುತ್ತಿರುವುದಾಗಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆ ಮುಂದೆ ಹೋರಾಟ ಮಾಡಲಿದೆ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನ, ನಮ್ಮ ತೆರಿಗೆ ನಮಗೆ ಕೊಡಿ ಎಂದು ದೊಡ್ಡ ಹೋರಾಟಕ್ಕೆ ಸಜ್ಜಾಗುತ್ತೇವೆ. ಕರ್ನಾಟಕ ಭಾರತದ ಒಕ್ಕೂಟದಲ್ಲಿ ಇದೇ ಅನ್ನುವುದನ್ನು ಕೇಂದ್ರ ಸರ್ಕಾರ ಮರೆಯಬಾರದು, ಯಾರೂ ಮರೆಯಬಾರದು ಎಂದು ಹೇಳಿದ್ದಾರೆ.
ನೀವು ತಾರತಮ್ಯ ಮಾಡಬೇಡಿ, ನಮ್ಮ ಹಣವನ್ನು ತೆಗೆದುಕೊಂಡು ಹೋಗಿ ಉತ್ತರ ಭಾರತದ ಯಾವುದೋ ರಾಜ್ಯಗಳಿಗೆ ಕೊಡುವ ಕೆಲಸ ಮಾಡಬೇಡಿ. ನಮಗೆ ಹೆಚ್ಚು ಅನುದಾನ ಕೊಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿಸುತ್ತೇವೆ ಎಂದಿದ್ದಾರೆ.
ಸರ್ಕಾರ ಮಾಡುವ ಹೋರಾಟಗಳು ರಾಜಕೀಯ ಪ್ರೇರಿತವಾದವು. ಇವತ್ತು ಕರ್ನಾಟಕ ಸರ್ಕಾರದ ಜೊತೆ ಯಾರೂ ಇಲ್ಲ. ಯಾವ ಕನ್ನಡಪರ, ರೈತಪರ, ದಲಿತಪರ ಚಳುವಳಿಗಾರರು ಇಲ್ಲ ಅವರಿಗೆ ಗೊತ್ತಾಗಿದೆ. ಚುನಾವಣೆ ವೇಳೆ ಏನು ಆಶ್ವಾಸನೆ ನೀಡಿದರು. ನಾವು ನಿಷ್ಠೆಯಿಂದ, ಬದ್ದತೆಯಿಂದ, ಕನ್ನಡ ಕಳಕಳಿಯಿಂದ ಕೆಲಸ ಮಾಡುತ್ತೇವೆ ಅಂತ ಸಿದ್ದರಾಮಯ್ಯ ಅವರು ಮಾತು ಕೊಟ್ಟಿದ್ದರು. ಆದರೆ ಇವತ್ತು ಸಿದ್ದರಾಮಯ್ಯ ಅವರು ಮಾತು ತಪ್ಪಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಾವು ಮಾಡಬೇಕಾದ ಹೋರಾಟ ಸರ್ಕಾರ ಮಾಡುತ್ತಿದೆ ಅಂದರೆ ಕನ್ನಡಪರ ಸಂಘಟನೆಗಳು ಸಿದ್ದರಾಮಯ್ಯ ಪರ ನಿಂತಿಲ್ಲ. ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಇವತ್ತು ಹೋರಾಟಕ್ಕೆ ಇಳಿದಿದ್ದಾರೆ. ಈ ಹೋರಾಟವನ್ನು ಕರವೇ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಕೇಂದ್ರದ ಅನುದಾನದಲ್ಲಿ ಅನ್ಯಾಯ ಆಗುತ್ತಿದೆ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕವೆ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಎಂದರು.