ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ದ್ವಿಶತಕ ಬಾರಿಸಿದರು. ವೈಝಾಗ್ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಮೊದಲ ಇನಿಂಗ್ಸ್ನಲ್ಲಿ ಏಕಾಂಗಿ ಹೋರಾಟ ನಡೆಸಿ 209 ರನ್ ಬಾರಿಸುವ ಮೂಲಕ ಯಶಸ್ವಿ ಜೈಸ್ವಾಲ್ ಭಾರಿ ಮೆಚ್ಚುಗೆ ಗಿಟ್ಟಿಸಿದ್ದರು.
ಕ್ರಿಕೆಟ್ ಫೀಲ್ಡ್ನಲ್ಲಿ ತಮ್ಮ ಅಮೋಘ ಪ್ರದರ್ಶನಗಳ ಮೂಲಕ ಯಶಸ್ವಿ ಜೈಸ್ವಾಲ್ ಭಾರಿ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಆಫ್ ದಿ ಫೀಲ್ಡ್ನಲ್ಲೂ ಅವರು ಬೆಳೆದು ಬಂದ ಹಾದಿ ಬಗ್ಗೆ ಅಷ್ಟೇ ರೋಚಕ ಕಥೆಯೇ ಇದೆ. ಉತ್ತರ ಪ್ರದೇಶ ಒಂದು ಪುಟ್ಟ ಗ್ರಾಮದಿಂದ ತನ್ನ 10ನೇ ವಯಸ್ಸಿಗೆ ಮುಂಬೈಗೆ ಬಂದ ಯಶಸ್ವಿ ಜೈಸ್ವಾಲ್, ಕ್ರಿಕೆಟ್ನಲ್ಲಿ ವೃತ್ತಿಬದುಕು ಕಟ್ಟಿಕೊಳ್ಳಲು ಪ್ರಸಿದ್ಧ ಆಝಾದ್ ಮೈದಾನದಲ್ಲಿ ಬೀಡುಬಿಟ್ಟು, ಇಂದು ಇಡೀ ಜಗತ್ತು ಸಲ್ಯೂಟ್ ಹೊಡೆಯುವ ಮಟ್ಟಿಗೆ ಬೆಳೆದು ನಿಂತಿದ್ದಾರೆ.
“ಕೆಲವೊಮ್ಮೆ ನನಗೆ ಬಹಳಾ ಬೇಸರವಾಗುತ್ತದೆ. ಏಕೆಂದರೆ ಯಶಸ್ವಿ ಜೈಸ್ವಾಲ್ ಅವರ ತಂದೆ ಮತ್ತು ಆತ ಹೊಟ್ಟೆ ಹೊರೆಯಲು ಪಾನಿಪುರಿ ಮಾರುತ್ತಿದ್ದರು ಎಂದೆಲ್ಲಾ ಹೇಳಲಾಗಿದೆ. ಇದನ್ನು ಕೇಳಿ ಬೇಸರವಾಯಿತು. 2013ರ ಡಿಸೆಂಬರ್ 17ರಿಂದ 2022ರ ಜನವರಿ 12ರವರೆಗೆ ಯಶಸ್ವಿ ಜೈಸ್ವಾಲ್ ನನ್ನ ಮನೆಯಲ್ಲೇ ನನ್ನ ಕುಟುಂಬ ಸದಸ್ಯನಾಗಿ ಉಳಿದುಕೊಂಡಿದ್ದಾನೆ. ಆತನ ಜೀವನದಲ್ಲಿ ಬಡತನ ಎಂಬುದಿಲ್ಲ. ಇದಕ್ಕೂ ಮುನ್ನ ಆಝಾದ್ ಮೈದಾನದಲ್ಲಿ ಆತ ಇದ್ದಾಗ ಏನಾದರೂ ಮಾಡಿರಬಹುದು. ಆದರೆ, ಆತ ಮತ್ತು ಆತನ ತಂದೆ ಪಾನಿಪುರಿ ಮಾರಾಟಗಾರರಲ್ಲ,” ಎಂದು ಜ್ವಾಲಾ ಸಿಂಗ್ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.