ಮಂಡ್ಯ :- ಮದ್ದೂರು ತಾಲೂಕಿನ ಸೋಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಸಿ ಲಾವಣ್ಯ, ಉಪಾಧ್ಯಕ್ಷರಾಗಿ ಎಸ್.ಎಲ್.ಶಂಕರ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಇಬ್ಬರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಆಶಾ ಅವರು ಆಯ್ಕೆಯನ್ನು ಘೋಷಣೆ ಮಾಡಿದರು.
ಇದೇ ವೇಳೆ ಸೋಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಟಿ.ಶಂಕರ್ ಅಧ್ಯಕ್ಷೆ ಎಂ.ಲಾವಣ್ಯ ಅವರನ್ನು ಅಭಿನಂದಿಸಿ ಮಾತನಾಡಿ, 1976 ರಿಂದ ಇಲ್ಲಿಯವರೆಗೂ ಸೋಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಹಿಳೆಯರು ಅಧ್ಯಕ್ಷರಾಗಿರಲಿಲ್ಲ. ಈ ಬಾರಿ ಎಂ.ಸಿ.ಲಾವಣ್ಯ ಅವರನ್ನು ಪ್ರಥಮ ಮಹಿಳಾ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆಯಾಗಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತರಿಗೆ ಮತ್ತು ಸಹಕಾರ ಸಂಘದ ಷೇರುದಾರರಿಗೆ ಅನುಕೂಲವಾಗುವಂತೆ ಎಲ್ಲಾ ನಿರ್ದೆಶಕರ ವಿಶ್ವಾಸ ಪಡೆದು ಸಂಘವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲಿ ಎಂದು ಕಿವಿಮಾತು ಹೇಳಿದರು.
ಸೋಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಸುರೇಶ್, ಪ್ರಕಾಶ್, ಚಿಕ್ಕಹೈದ ಶೆಟ್ಟಿ, ಬಾಬು, ರಾಮು, ಎಸ್.ಎಂ. ಸತೀಶ್, ಹೇಮಾ, ರಾಧ, ಮಣಿ, ನವೀನ್, ಗ್ರಾ.ಪಂ ಸದಸ್ಯ ಟಿ.ಸಿ. ಪ್ರೀತಮ್, ಮುಖಂಡರಾದ ರಾಜೇಂದ್ರ, ಸುಧೀರ್, ಲೋಹಿತ್, ಕಾರ್ಯದರ್ಶಿ ಕವಿತಾ ಇದ್ದರು.