ಬೆಂಗಳೂರು: ಇತ್ತೀಚೆಗೆ ಕೆಆರ್ಪುರಂ ಠಾಣಾ ವ್ಯಾಪ್ತಿಯಲ್ಲಿ ತಿಂಡಿ ಮಾಡಿಲ್ಲ ಅಂತಾ ತಾಯಿಯನ್ನ ಮಗನೇ ಹತ್ಯೆಗೈದ ಪ್ರಕರಣ ಬೆಳಕಿಗೆ ಬಂದಿತ್ತು. ಅಂದ್ರೆ ಇದೀಗ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹೌದು,ನೇತ್ರಾ ಎಂಬಾಕೆಯನ್ನು ಮಗ ಪವನ್ ಕೊಲೆ ಮಾಡಿದ್ದನು. ರಾಡ್ನಿಂದ ಹೊಡೆದು ಸಾಯಿಸಿದ್ದನು. ಹೀಗಾಗಿ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಮಗನ ವಿಚಾರಣೆ ವೇಳೆ ಸತ್ಯ ಹೊರಬಿದ್ದಿದೆ.
ಗಂಡ, ಮಗ ಸೇರಿ ಕೊಲೆ
ನೇತ್ರಾ ಪಾರ್ಟಿಗೀರ್ಟಿ, ಐಷಾರಾಮಿ ಹುಚ್ಚಿಗೆ ಬಿದ್ದು ಗಂಡ, ಮಗನಿಂದಲೇ ಕೊಲೆಯಾಗಿದ್ದಾಳೆ. ಕೊಲೆ ನಡೆದ ಕೂಡಲೇ ಮಗ ಪವನ್ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದನು. ಆದ್ರೆ ತನಿಖೆ ವೇಳೆ ನೇತ್ರಾಳನ್ನು ಗಂಡ, ಮಗ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಐಷಾರಾಮಿ ಹುಚ್ಚಿಗೆ ಬಿದ್ದಿದ್ದ ನೇತ್ರಾ
ರಾಡ್ ನಿಂದ ಹೊಡೆದು ನೇತ್ರಾಳನ್ನು ಕೊಲೆ ಮಾಡಲಾಗಿತ್ತು. ಹಾಗಾಗಿ ಎಫ್ ಎಸ್ ಎಲ್ ಪರಿಶೀಲನೆ ವೇಳೆ ಮಹಿಳೆ ಪತಿಯ ಕೈವಾಡವೂ ಬೆಳಕಿಗೆ ಬಂದಿದೆ. ವೆಪನ್ ವಶಪಡೆದು ಎಫ್ ಎಸ್ ಎಲ್ ಗೆ ಕಳಿಸಿದ್ದಾಗ ರಾಡ್ ನ ಮೇಲೆ ಇಬ್ಬರ ಫಿಂಗರ್ ಪ್ರಿಂಟ್ ಪತ್ತೆಯಾಗಿದೆ. ಪತಿ ಚಂದ್ರಪ್ಪ ಕೂಡ ಕೊಲೆಯಲ್ಲಿ ಭಾಗಿ ಅನ್ನೋದು ಗೊತ್ತಾಗಿದೆ.
ಅಕ್ರಮ ಸಂಬಂಧದ ಬಗ್ಗೆ ಅನುಮಾನ
ಪಾರ್ಟಿಗೀರ್ಟಿ, ಐಷಾರಾಮಿ ಹುಚ್ಚಿಗೆ ಬಿದ್ದಿದ್ದ ನೇತ್ರಾ, ಮನೆ ಬಿಟ್ಟು ಹೊರಗಡೆಯೇ ಹೆಚ್ಚು ಓಡಾಟ ನಡೆಸುತ್ತಿದ್ದಳು. ಅಲ್ಲದೇ ಪತಿ ಚಂದ್ರಪ್ಪಗೆ ಆಕೆಯ ಮೇಲೆ ಅಕ್ರಮ ಸಂಬಂಧದ ಬಗ್ಗೆಯೂ ಅನುಮಾನವಿತ್ತು. ಈ ವಿಚಾರವಾಗಿ ಆಗಾಗ ಜಗಳ ಆಗುತ್ತಿತ್ತು. ಮಾತ್ರವಲ್ಲದೆ, ನೇತ್ರಾ ಗಂಡ ಮಗನಿಗೆ ಅಡುಗೆ ಮಾಡಿ ಹಾಕದೆ ಹೊರಗಡೆಯೇ ಸುತ್ತಾಡುತ್ತಿದ್ದಳು. ಈ ಎಲ್ಲಾ ವಿಚಾರವಾಗಿ ಮನೇಲಿ ಆಗಾಗ ಜಗಳ ಆಗ್ತಿತ್ತು.