ರಾಯಚೂರು: ಎರಡು ವಿಷ್ಣು ಅವತಾರದ ವೆಂಕಟೇಶ್ವರ ಸ್ವಾಮಿ ಮೂರ್ತಿಗಳು ಹಾಗೂ ಶಿವಲಿಂಗ ಪತ್ತೆಯಾಗಿರುವ ಘಟನೆ ಜಿಲ್ಲೆಯ ದೇವಸುಗೂರು ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ. ವೆಂಕಟೇಶ್ವರನ ಮೂರ್ತಿಯೊಂದು ಅಯೋಧ್ಯ (Ayodhya) ಬಾಲರಾಮನ (BalaRama) ವಿನ್ಯಾಸವನ್ನ ಹೊಂದಿರುವುದು ಅಚ್ಚರಿ ಮೂಡಿಸಿದೆ. ನದಿಯಲ್ಲಿ ನೀರು ಬತ್ತಿದ್ದು ಮೀನುಗಾರರು ಇದ್ದ ನೀರಿನಲ್ಲೇ ಮೀನು ಹಿಡಿಯುತ್ತಿದ್ದ ವೇಳೆ ಮೂರ್ತಿಗಳು ಪತ್ತೆಯಾಗಿವೆ.
ಅಲ್ಲದೆ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾರ್ಯ ನಡೆದಿದ್ದು ಅಲ್ಲಲ್ಲಿ ಮಣ್ಣು ಅಗೆಯಲಾಗಿತ್ತು. ಭೂಮಿಯಲ್ಲಿ ಹೂತು ಹೋಗಿದ್ದ ಮೂರ್ತಿಗಳು ಈಗ ಹೊರಗೆ ಬಂದಿರಬಹುದು ಎನ್ನಲಾಗಿದೆ. ಸಿಕ್ಕಿರುವ ಮೂರು ಮೂರ್ತಿಗಳು ವಿಭಿನ್ನವಾಗಿವೆ. ಮೂರುವರೆ ಅಡಿಯ ಒಂದು ಏಕಶಿಲಾ ಮೂರ್ತಿಯಂತೂ ಅಯೋಧ್ಯ ಬಾಲರಾಮನ ವಿನ್ಯಾಸವನ್ನು ಹೋಲುತ್ತದೆ.
ವಿಷ್ಣುವಿನ (Vishnu) ದಶವತಾರಗಳನ್ನ ಮೂರ್ತಿಯಲ್ಲಿ ಕೆತ್ತಲಾಗಿದೆ. ಇನ್ನೊಂದು ಮೂರ್ತಿ ಎರಡೂವರೆ ಅಡಿಯಷ್ಟಿದೆ. ವಿಷ್ಣು ಮೂರ್ತಿಗಳಲ್ಲಿ ಸಾಮಾನ್ಯವಾಗಿ ಕೆಳಗಡೆ ಜಯವಿಜಯ ಚಿತ್ರ ಕಾಣಲಾಗುತ್ತೆ. ಆದರೆ ಇಲ್ಲಿ ಲಕ್ಷ್ಮಿ ಪದ್ಮಾವತಿ ಚಿತ್ರಗಳಿವೆ. ಈ ಮೂರ್ತಿಗಳನ್ನು ಕಂಡ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದು, ಸಾವಿರಾರು ವರ್ಷಗಳ ಹಳೆಯ ಮೂರ್ತಿಗಳು ಇರಬಹುದು ಎಂದು ಊಹಿಸುತ್ತಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು ಅಂತ ಒತ್ತಾಯಿಸಲಾಗಿದೆ.