ಕೋಲಾರ:– ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಬಿ.ಸಿ.ಮುದ್ದು ಗಂಗಾಧರ್, ಮಾಜಿ ಸಚಿವ ಟಿ.ಚನ್ನಯ್ಯ ಅವರ ಮೊಮ್ಮಗ ಅಗಿದ್ದಾರೆ. ಆದರೆ, ನಮ್ಮ ಅಣ್ಣ, ಬಾಲಾಜಿ ಚನ್ನಯ್ಯ ಯಾರದ್ದೋ ಮಾತು ಕೇಳಿಕೊಂಡು ಮೊಮ್ಮಗ ಅಲ್ಲವೆಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ’ ಎಂದು ಮಾಜಿ ಸಚಿವ ಟಿ.ಚನ್ನಯ್ಯ ಅವರ ಪುತ್ರ ಲಕ್ಷ್ಮಿನಾರಾಯಣ ಅವ್ರು, ಹೇಳಿದ್ರು.
ಇಂದು ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಟಿ.ಚನ್ನಯ್ಯ ಅವ್ರು ಮೂವರು ಪತ್ನಿಯರನ್ನು ಹೊಂದಿದ್ದರು. ಅವರಲ್ಲಿ ನನ್ನ ತಾಯಿ ಜಯಲಕ್ಷ್ಮಮ್ಮ ಅವರ ಅಣ್ಣ, ಕೋಲಾರ ತಹಶೀಲ್ದಾರ್ ಆಗಿದ್ದ ತಿರುಮಲಯ್ಯ ಅವರ ಮೊಮ್ಮಗ ಮುದ್ದು ಗಂಗಾಧರ್. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ತಿಪ್ಪೇನಹಳ್ಳಿ ಗ್ರಾಮದ ನಿವಾಸಿ. ಹೀಗಾಗಿ, ಟಿ.ಚನ್ನಯ್ಯ ಮೊಮ್ಮಗ ಎಂದು ಗುರುತಿಸಿಕೊಳ್ಳಲು ಹಾಗೂ ಪರಿಚಯಿಸಿಕೊಳ್ಳುತ್ತಿರುವುದರಲ್ಲಿ ಯಾವುದೇ ತಪ್ಪು ಇಲ್ಲ’ ಎಂದರು.
ಬಾಲಾಜಿ ಚನ್ನಯ್ಯ ಸುಳ್ಳು ಹೇಳಿಕೆ ನೀಡುತ್ತಿದ್ದು, ಕುಟುಂಬಕ್ಕೆ ಇರಿಸು ಮುರಿಸು ಉಂಟಾಗುತ್ತಿದೆ. ಇದರಿಂದ ಹಲವರಿಗೆ ಬೇಸರವೂ ಆಗಿದೆ. ಅವರು ತಮ್ಮ ಆತ್ಮಸಾಕ್ಷಿಗೆ ನಡೆದುಕೊಳ್ಳಬೇಕು, ಯಾವುದೋ ಲಾಭಕ್ಕಾಗಿ, ದುರುದ್ದೇಶದಿಂದ ಸುಳ್ಳು ಹೇಳಬಾರದು’ ಎಂದು ಮನವಿ ಮಾಡಿದರು.
‘ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯ, ಕಲಹ ಇಲ್ಲ. ಬಾಲಾಜಿ ಜೊತೆಗೂ ವೈಯಕ್ತಿಕ ದ್ವೇಷ ಇಲ್ಲ. ಮುಂಬರುವ ಚುನಾವಣೆಯಲ್ಲಿ ಬಾಲಾಜಿ ಜೆಡಿಎಸ್ ಪಕ್ಷದ ಟಿಕೆಟ್ ಅಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಟಿಕೆಟ್ ಲಭಿಸಿದರೆ ಅವರ ಗೆಲುವಿಗೆ ನಮ್ಮ ಕುಟುಂಬದವರೆಲ್ಲಾ ಶ್ರಮಿಸುತ್ತೇವೆ. ಈ ಹಿಂದೆ ಎರಡು ಭಾರಿ ಲೋಕಸಭೆಗೆ ಸ್ವರ್ಧಿಸಿ ತೀರಾ ಕಡಿಮೆ ಮತಗಳಿಂದ ಸೋಲು ಕಂಡಿದ್ದರು. ಆ ಸಂದರ್ಭದಲ್ಲೂ ನಮ್ಮ ಕುಟುಂಬದವರು ಶ್ರಮಿಸಿದ್ದರು’ ಎಂದು ಹೇಳಿದರು.
ಟಿ.ಚನ್ನಯ್ಯ ಮೊಮ್ಮಗ ಸಂದೀಪ್ ಮಾತನಾಡಿ, ‘ಬಾಲಾಜಿ ನನಗೆ ಚಿಕ್ಕಪ್ಪ ಆಗಬೇಕು. ಮುದ್ದು ಗಂಗಾದರ್ ಸಹೋದರ ಆಗಬೇಕು. ಬಾಲಾಜಿ ಅವರು ರಾಜಕೀಯ ಕ್ಷೇತ್ರದಲ್ಲಿ ಮುದ್ದು ಗಂಗಾದರ್ ಬೆಳವಣಿಗೆಯಿಂದ ಅಸೂಯೆ ಪಟ್ಟು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಮೂಲಕ ಅವರ ವರ್ಚಸ್ಸಿಗೆ ಮಸಿ ಬಳಿಯುತ್ತಿದ್ದಾರೆ’ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಚನ್ನಯ್ಯ ಕುಟುಂಬದ ನಟರಾಜ್ ಹಾಗೂ ತಿಮ್ಮರಾಜ್ ಪಾಲ್ಗೊಂಡಿದ್ದರು.