ಚಿಕ್ಕಮಗಳೂರು:- ಮಲೆನಾಡಿನಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿ ಆಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.
ವಯೋಸಹಜ ಅನಾರೋಗ್ಯದಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ 79 ವರ್ಷದ ವೃದ್ಧ ಬಳಲುತ್ತಿದ್ದರು. ಇವರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಇದೀಗ ಕೊನೆಯುಸಿರೆಳೆದಿದ್ದಾರೆ. ರೆಡ್ ಝೋನ್ನಲ್ಲಿ ತಪಾಸಣೆ ಮಾಡಿದಾಗ ವೃದ್ಧನಲ್ಲಿ ಕೆಎಫ್ಡಿ ಪತ್ತೆಯಾಗಿದೆ. ವೃದ್ಧನ ಸಾವಿನಿಂದ ಮಲೆನಾಡಿನ ಜನರಲ್ಲಿ ಆತಂಕ ಹೆಚ್ಚಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಮಂಗನ ಕಾಯಿಲೆ ಪ್ರಕರಣ ಹೆಚ್ಚುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಳೆದ 10 ದಿನಗಳಲ್ಲಿ ಬರೊಬ್ಬರಿ 21 ಜನರಿಗೆ ಸೋಂಕು ತಗುಲಿದ್ದು, ಬಿಸಿಲು ಹೆಚ್ಚಾದಂತೆ ಕಾಯಿಲೆ ಹೆಚ್ಚಾಗುವ ಆತಂಕವೂ ಜನರಲ್ಲಿ ಮನೆ ಮಾಡಿದೆ. ಇನ್ನು ಈ ಸೋಂಕು ಹರಡುವಿಕೆ ತಡೆಗೆ ಸದ್ಯ ರೋಗ ನಿರೋಧಕ ಲಸಿಕೆ ಇಲ್ಲವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಳ್ಳುವುದೊಂದೇ ದಾರಿ ಮತ್ತು ಅತೀ ಅವಶ್ಯಕ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.