ಹೊಸಪೇಟೆ :– ಹಂಪಿ ಉತ್ಸವ ಅಂಗವಾಗಿ ಹಂಪಿಯ ಶ್ರೀ ವಿರುಪಾಕ್ಷೇಶ್ವರ ವೇದಿಕೆಯಲ್ಲಿ ಫೆಬ್ರವರಿ 3ರಂದು ಮಹಿಳಾ ಗೋಷ್ಠಿ ನಡೆಯಿತು.
ಮರಿಯಮ್ಮನಹಳ್ಳಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದರಾದ ಡಾ.ಕೆ. ನಾಗರತ್ನಮ್ಮ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮತನಾಡಿದ ಅವರು ಸಾಹಿತ್ಯದ ಅರಿವಿದ್ದಾಗ ಮಾತ್ರ ಕಲಾವಿದರಾಗಲು ಸಾಧ್ಯ. ˌನನ್ನ ಇಡೀ ಜೀವನವನ್ನು ನಾಟಕರಂಗಕ್ಕೆ ಅರ್ಪಿಸಿಕೊಂಡಿರುವ ಸಂತಪ್ತಿ ಇದೆ. ಉನ್ನತ ವ್ಯಾಸಂಗ ಮಾಡದಿದ್ದರುˌರಂಗಭೂಮಿಯಲ್ಲಿನ ಜೀವಮಾನದ ಸಾಧನೆಗೆ ಗೌರವ ಡಾಕ್ಟರೇಟ್ ಪಡೆದ ಹೆಮ್ಮೆ ಇದೆ ಎಂದರು.
ಬೆಳಗಾವಿಯ ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿಗಳಾದ ಡಾ ಎಎಂ.ಜಯಶ್ರೀ ಅವರು `ಸಂಸ್ಕೃತಿ ಕಾಪಿಟ್ಟ ಮಹಿಳೆಯರು’ ವಿಷಯದ ಕುರಿತು ಮಾತನಾಡಿ, ಸದ್ಗುಣಗಳ ಸಾರವೇ ಸಂಸ್ಕೃತಿಯಾಗಿದ್ದು, ವಿಜಯನಗರ ಸಾಮ್ರಾಜ್ಯದ ಕಾಲದಿಂದ ಇಲ್ಲಿಯವರೆಗೆ ಸಾವಿರಾರು ವರ್ಷಗಳ ಪಾಠದ ತಿರುಳೆ ಸಂಸ್ಕೃತಿಯಾಗಿದೆ.
ಸ್ಮಾರಕಗಳಲ್ಲಿ ಮಹಿಳೆಯರ ದಿನನಿತ್ಯದ ಕಾರ್ಯವನ್ನು ಕಾಣಬಹುದಾಗಿದೆ ಎಂದರು.
ಲೇಖಕರಾದ ಸುಧಾ ಚಿದಾನಂದಗೌಡ ಅವರು `ಶಿಕ್ಷಣದ ಬೆಳಕಿನಲ್ಲಿ ಮಹಿಳೆ-ಮಿತಿ ಮತ್ತು ಪರಿಹಾರ’ ವಿಷಯದ ಬಗ್ಗೆ ಮಾತನಾಡಿ, ವಚನಸಾಹಿತ್ಯದ ಮೂಲಕ ಮಹಿಳೆ ಬೆಳಕಿನ ಕಿರಣವನ್ನು ಮೊದಲು ನೋಡಿದ್ದು, ಈ ಹಿಂದೆ ಮುಜುಗರಪಟ್ಟು ಕಲಿಕೆಯಿಂದ ಹಿಂದೆ ಸರಿಯುತ್ತಿದ್ದ ಹೆಣ್ಣುಮಕ್ಕಳಿಗೆ ಬಾಲಿಕಾ ಶಿಕ್ಷಣ ಕೇಂದ್ರಗಳನ್ನು ಆರಂಭಿಸಿದ ಕೀರ್ತಿ ಸಾವಿತ್ರಿಬಾಯಿ ಪುಲೆ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಡಾ.ನಿರ್ಮಲಾ ಶಿವನಗುತ್ತಿ ಅವರು `ವಿಜಯನಗರ ಸಾಮ್ರಾಜ್ಯದ ಮಹಿಳೆಯರ ಸ್ಥಾನಮಾನ’ ವಿಷಯದ ಕುರಿತು ಮಾತನಾಡಿ, ಜಗತ್ತೇ ತಿರುಗಿನೋಡುವಂತಹ ಕಾರ್ಯವನ್ನು ಶ್ರೀಕೃಷ್ಣದೇವರಾಯರು ಮಾಡಿದ್ದಾರೆ. ಹಿಂದಿನ ಕಾಲದಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಎಂಟು ಭಾಷೆಯಲ್ಲಿ ಪ್ರಾವಿಣ್ಯತೆಯನ್ನು ಪಡೆದಿದ್ದರು ಎಂದು ತಿಳಿಸಿದರು. ಡಾ.ಕೆ ನಾಗಪುಷ್ಪಲತ ಅವರು `ಹಂಪಿಯ ಹರಿದಾಸರು’ ವಿಷಯದ ಕುರಿತು ಮಾತನಾಡಿ, ವಿಜಯನಗರ ಸಾಮ್ರಾಜ್ಯ ಅಳಿದರೂ ಹರಿದಾಸ ಸಾಹಿತ್ಯ ಪ್ರಚಲಿತವಾಗಿದ್ದು, ಜನಸಾಮಾನ್ಯರ ಬದುಕಿಗೆ ನೀತಿಸಂಹಿತೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಹಿತಿಗಳಾದ ಎಚ್ ಸೌಭಾಗ್ಯಲಕ್ಷ್ಮಿ ಅವರು `ವಿಜಯನಗರ ಕಾಲದ ಮಹಿಳಾ ಬದುಕಿನ ಒಳನೋಟಗಳು’ ಎಂಬ ವಿಷಯದ ಕುರಿತು ಮಾತನಾಡಿದರು. ಚಿಂತಕರಾದ ಡಾ ಡಿ.ಎನ್.ಸುಜಾತಾ ಅವರು ಮಾತನಾಡಿ, ಸಂಸ್ಕೃತಿ ಪರಂಪರೆ ಸಹಿತ ಅನೇಕ ಸ್ಥರಗಳಲ್ಲಿ ಮಹಿಳೆಯರ ಪಾಲಿದೆ. ವಿಜಯನಗರ ಸಾಮ್ರಾಜ್ಯದ ಮೇಲೆ ಸಾಕಷ್ಟು ದಾಳಿ ನಡೆದರು ಇಂದಿಗೂ ಪ್ರತಿ ಕಲ್ಲುಗಳು ಮಾತನಾಡುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಾಹಿತಿಗಳಾದ ಎನ್.ಡಿ.ವೆಂಕಮ್ಮ ಅವರು ಮಾತನಾಡಿ, ಮಹಿಳೆಯರ ಉನ್ನತಿಯಲ್ಲಿ ಬುದ್ಧ ˌಬಸವ ˌಅಂಬೇಡ್ಕರ್ ರವರು ಮಹತ್ತರ ಪಾತ್ರ ವಹಿಸಿದ್ದಾರೆ. ಗೋಷ್ಠಿಯಲ್ಲಿ ಮಹತ್ವವಾದ ವಿಷಯಗಳು ಮಂಡನೆಯಾಗಿದ್ದು, ಅವುಗಳನ್ನೆಲ್ಲಾ ಪುಸ್ತಕರೂಪಕ್ಕೆ ಮಾರ್ಪಾಡಾದರೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ವಿಷಯ ಮಂಡನೆ ಮಾಡಿದ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಆಯೋಜಕರಾದ ದಯಾನಂದ ಕಿನ್ನಾಳ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ವಿಭಾಗ)ಉಪನಿರ್ದೇಶಕರಾದ ನಾಗರಾಜ ಹವಾಲ್ದಾರ ಸೇರಿದಂತೆ ಮತ್ತಿತರರಿದ್ದರು. ಡಾ.ಕೆ ಪಾರ್ವತಿಯವರು ನಿರೂಪಿಸಿದರು. ಕುಮಾರಸ್ವಾಮಿ ಅವರು ವಂದಿಸಿದರು. ಬಳಿಕ ನಡೆದ ಮಹಿಳಾ ಕವಿಗೋಷ್ಠಿಯನ್ನು ಪದ್ಮಶ್ರೀ ಪುರಸ್ಕೃತರಾದ ಮಂಜಮ್ಮ ಜೋಗತಿ ಅವರು ಉದ್ಘಾಟಿಸಿದರು.