ಬೆಂಗಳೂರು: ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಗೌರವ ಸಂದಿರುವುದು ಹೆಮ್ಮೆಯ ವಿಷಯವಾಗಿದ್ದು, ಅವರಿಗೆ ಅಭಿನಂದನೆ. ಎಲ್. ಕೆ. ಅಡ್ವಾಣಿ ಅವರು ನಿಜವಾದ ಭಾರತದ ಮಣ್ಣಿನ ಮಗನಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿಯವರಿಗೆ ಭಾರತ ರತ್ನ ಗೌರವ ಸಂದಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಅಡ್ವಾಣಿಯವರು ದೇಶ ವಿಭಜನೆಯ ಸಂದರ್ಭದಲ್ಲಿ ಭಾರತಕ್ಕೆ ಬಂದು ನೆಲೆಸಿದರು. ಅವರಿಗೆ ಭಾರತ ರತ್ನ ಗೌರವ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಅಡ್ವಾಣಿಯವರು ತಮ್ಮ ಸಾರ್ವಜನಿಕ ಜೀವನವನ್ನು ಜನಸಂಘದಿಂದ ಆರಂಭಿಸಿ, ಶ್ಯಾಮಪ್ರಸಾದ ಮುಖರ್ಜಿ ಅವರ ಜೊತೆಗೆ ಕಾಶ್ಮೀರ ಹೋರಾಟದಲ್ಲಿ ಪಾಲ್ಗೊಂಡು ತಮ್ಮ ದೇಶಪ್ರೇಮವನ್ನು ಮೆರೆದರು. ರಾಮಜನ್ಮಭೂಮಿ ಹೋರಾಟದಲ್ಲಿ ಅಡ್ವಾಣಿಯವರು ಅತ್ಯಂತ ಪ್ರಮುಖ ಪಾತ್ರವಹಿಸಿ, ದೇಶವನ್ನು ಭಾವನಾತ್ಮಕವಾಗಿ ಒಗ್ಗೂಡಿಸಿದರು. ಅವರ ಹೋರಾಟದ ಫಲವಾಗಿ ಕೋಟ್ಯಂತರ ಭಾರತೀಯರ ಕನಸಾಗಿದ್ದ ರಾಮಂದಿರ ಇಂದು ನನಸಾಗಿದೆ.