ಕೊಪ್ಪಳ:- ರಾಜ್ಯದ ಅನೇಕ ಕಡೆ ಮಂಗನಬಾವು ಹೆಚ್ಚಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಕೂಡ ತೀರ್ವವಾಗಿದೆ. ಜಿಲ್ಲೆಯ ನೂರಾರು ಮಕ್ಕಳು ಮಂಗನ ಬಾವುವಿನ ವೈರಸ್ ತಗುಲಿದ್ದರಿಂದ ಪರದಾಡುತ್ತಿದ್ದಾರೆ. ಯಾವುದೇ ಆಸ್ಪತ್ರೆಗೆ ಹೋದರೂ ಕೂಡ ಮಂಗನ ಬಾವುವಿನಿಂದ ಬಳಲುತ್ತಿರುವ ಮಕ್ಕಳು ಕಾಣಸಿಗುತ್ತಿದ್ದಾರೆ.
ಇನ್ನು ಮಂಗನ ಬಾವು, ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಬೇಗನೆ ಹರಡುತ್ತದೆ. ಅದರಲ್ಲೂ ಮಕ್ಕಳಲ್ಲಿ ಬೇಗನೆ ಹರಡುವುದರಿಂದ ಜಿಲ್ಲೆಯ ಅನೇಕ ಮಕ್ಕಳು ಮಂಗನ ಬಾವುವಿಗೆ ಹೈರಾಣಾಗಿವೆ. ಮಂಗನ ಬಾವು ವೈರಾಣುವಿಗೆ ತುತ್ತಾಗಿರುವ ಮಕ್ಕಳು ತೀರ್ವ ಜ್ವರ ಮತ್ತು ಮುಖದ ಕೆಳಗಿನ ಬಾಗ ಊದಿಕೊಳ್ಳುತ್ತದೆ. ನೋವು ಕೂಡಾ ತೀರ್ವವಾಗಿ ಬಾಧಿಸುತ್ತದೆ. ಕೆಲವರಲ್ಲಿ ವೈರಾಣುವಿನ ಲಕ್ಷಣಗಳು ಸೂಕ್ಷ್ಮವಾಗಿದ್ದರೆ, ಇನ್ನು ಕೆಲವರಲ್ಲಿ ತೀರ್ವವಾಗಿವೆ. ಹೀಗಾಗಿ ಅನೇಕ ಮಕ್ಕಳು, ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಹೋಗುತ್ತಿದ್ದರೆ, ತೀರ್ವ ಜ್ವರವಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಮಕ್ಕಳಲ್ಲಿ ಮಾತ್ರವಲ್ಲ, ದೊಡ್ಡವರಲ್ಲಿಯೂ ಕೂಡ ಮಂಗನಬಾವು ಉಂಟಾಗಿದ್ದು, ಜ್ವರ ಸೇರಿದಂತೆ ಅನೇಕ ರೀತಿಯ ತೊಂದೆರೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಮಾತನಾಡಿದ ಕೊಪ್ಪಳ ಜಿಲ್ಲಾ ಆರೋಗ್ಯಾಧಿಕಾರಿ ಟಿ.ಲಿಂಗರಾಜು, ‘ ಮಂಗನಬಾವು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗುವ ಈ ಸೋಂಕು, ಚಳಿಗಾಲ ಮುಗಿಯುವ ಹಂತದಲ್ಲಿದ್ದರೂ ಕೂಡ ಕಡಿಮೆಯಾಗದೇ, ತೀರ್ವವಾಗುತ್ತಿದೆ. ಮಕ್ಕಳು ಶಾಲೆಗೆ ಹೋಗುವುದು ಮತ್ತು ಕೂಡಿ ಆಟವಾಡುವುದರಿಂದ ಮಕ್ಕಳಲ್ಲಿ ಬಹುಬೇಗನೇ ಈ ಸೋಂಕು ಹರಡುತ್ತದೆ. ಹೀಗಾಗಿ ಸೋಂಕಿನ ಲಕ್ಷಣ ಇರುವ ಮಕ್ಕಳು ಶಾಲೆಗೆ ಹೋಗದೇ ಪ್ರತ್ಯೇಕವಾಗಿ ಇರುವುದರಿಂದ ಸೋಂಕು ಹಬ್ಬದಂತೆ ನೋಡಿಕೊಳ್ಳಬಹುದಾಗಿದೆ ಎಂದರು.