ಕಾಲಿವುಡ್ ಸ್ಟಾರ್ ವಿಜಯ್ ದಳಪತಿ (Vijay Thalapathy) ಅವರು ಇದೀಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮದೇ ಸ್ವಂತ ಪಕ್ಷ ಕಟ್ಟಿ ಪಾಲಿಟಿಕ್ಸ್ಗೆ ಪಾದಾರ್ಪಣೆ ಮಾಡಿದ್ದಾರೆ. ‘ತಮಿಳಿಗ ವೆಟ್ರಿ ಕಳಗಂ’ (TVK) ಎಂದು ಪಕ್ಷಕ್ಕೆ ಹೆಸರನ್ನಿಟ್ಟಿದ್ದಾರೆ.
ಸಾಕಷ್ಟು ಸಮಯದಿಂದ ವಿಜಯ್ ದಳಪತಿ ಅವರು ರಾಜಕೀಯಕ್ಕೆ ಬರುವ ಬಗ್ಗೆ ಚಾಲ್ತಿಯಲ್ಲಿತ್ತು. ಯಾವ ಪಕ್ಷಕ್ಕೆ ಸೇರಬಹುದು ಎಂದು ಭಾರೀ ಚರ್ಚೆಯಾಗಿತ್ತು. ಇದೀಗ ತಮ್ಮದೇ ಪಕ್ಷ ಕಟ್ಟಿ ಈ ಮೂಲಕ ಜನಸೇವೆ ಮಾಡಲು ವಿಜಯ್ ಮುಂದಾಗಿದ್ದಾರೆ. 2026ರ ವಿಧಾನಸಭಾ ಚುನಾವಣೆಗೆ ವಿಜಯ್ ಪಕ್ಷ ಸ್ಪರ್ಧೆಗೆ ಇಳಿಯಲಿದೆ.
ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ನಟ ವಿಜಯ್, ನಮ್ಮ ಪಕ್ಷ ‘ತಮಿಳ್ ವೆಟ್ರಿ ಕಳಗಂ’ ನ್ನು ನೋಂದಾಯಿಸಲು ಚುನಾವಣಾ ಆಯೋಗಕ್ಕೆ ಇಂದು ಅರ್ಜಿ ಸಲ್ಲಿಸುತ್ತಿದ್ದೇವೆ, ಮುಂಬರುವ 2026 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಮೂಲಭೂತ ರಾಜಕೀಯ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ. ಅದೇ ರೀತಿ ನಾವು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ನಾವು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಸಾಮಾನ್ಯ ಮತ್ತು ಕಾರ್ಯಕಾರಿ ಮಂಡಳಿ ಸಭೆಗಾಗಿ ನಾವು ಈ ನಿರ್ಧಾರವನ್ನು ಮಾಡಿದ್ದೇವೆ ಎಂದು ಕೂಡ ಸ್ಪಷ್ಟನೆ ನೀಡಿದ್ದಾರೆ.
ನಟ ವಿಜಯ್ ಅವರ ಆಪ್ತರು ಹೇಳುವ ಪ್ರಕಾರ, ಕೇರಳ ಮತ್ತು ಕರ್ನಾಟಕದಲ್ಲಿ ಅವರ ಬಲವಾದ ಮತ್ತು ಸಂಘಟಿತ ಅಭಿಮಾನಿಗಳನ್ನು ಗಮನಿಸಿದರೆ ಪಕ್ಷದ ವ್ಯಾಪ್ತಿಯು ತಮಿಳುನಾಡು ರಾಜ್ಯವನ್ನು ಮೀರಿ ವಿಸ್ತರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಹೊಸ ರಾಜಕೀಯ ಪಕ್ಷ ಘೋಷಿಸಿರುವ ನಟ ವಿಜಯ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧಾರ ಮಾಡಿದ್ದಾರೆ. ತಮಿಳಗ ವಿಟ್ರಿ ಕಜಂ 2024ರ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ. ಹಾಗೆಯೇ ಬೇರೆ ಪಕ್ಷಗಳಿಗೆ ಬೆಂಬಲ ನೀಡಲ್ಲ ಎಂದು ನಟ ವಿಜಯ್ ಘೋಷಿಸಿದ್ದಾರೆ. ಪಕ್ಷದ ಅಧ್ಯಕ್ಷರಾಗಿಯೂ ಆಯ್ಕೆಯಾಗಿರುವ ನಟ ವಿಜಯ್ ಅವರು ಪಕ್ಷದ ಸಾಮಾನ್ಯ ಹಾಗೂ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ತಮಿಳುನಾಡಿನಲ್ಲಿ 2026ಕ್ಕೆ ವಿಧಾನಸಭಾ ಚುನಾವಣೆ ಎದುರಾಗಲಿದೆ. ಆಗ ದಳಪತಿ ವಿಜಯ್ ರಾಜಕೀಯದ ಖದರ್ ಅನಾವರಣ ಆಗುವ ಸಾಧ್ಯತೆ ಇದೆ.