ವರ್ತೂರು ಸಂತೋಷ್ (Varthur Santhosh) ಬಿಗ್ ಬಾಸ್ನಲ್ಲಿ ಕೊನೆವರೆಗೂ ಇದ್ದು ಬಂದಿದ್ದಾರೆ. ಆದರೆ ಸುಮ್ಮನೆ ಬಂದಿಲ್ಲ. ಕರುನಾಡಿನ ಮನಸನ್ನು ಗೆದ್ದಿದ್ದಾರೆ. ಅನೇಕ ವಿವಾದಗಳಿಂದ ಸೋತು ಹೋಗಿದ್ದವರನ್ನು ಜನರೇ ಎದ್ದು ನಿಲ್ಲಿಸಿ ಬಹುಪರಾಕ್ ಹಾಕಿದ್ದಾರೆ. ಹೀಗಾಗಿಯೇ ಇಂದು ಸಂತೋಷ್ ಬೆಂಕಿಯಲ್ಲಿ ಅರಳಿದ ಹೂವಾಗಿ ನಿಂತಿದ್ದಾರೆ. ಇದೀಗ ಮದುವೆ ವಿವಾದದ ಬಗ್ಗೆ ವರ್ತೂರು ಸಂತೋಷ್ ಮಾತನಾಡಿದ್ದಾರೆ.
ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ (Bigg Boss Kannada 10) ಹೋಗೋವರೆಗೆ ಇವರು ಯಾರೆಂದು ಕರುನಾಡಿಗೆ ಅರಿವು ಇರಲಿಲ್ಲ. ಕಾರಣ ಸೋಷಿಯಲ್ ಮೀಡಿಯಾದಲ್ಲಿ ಇವರು ಹೆಸರು ಮಾಡಿದ್ದರು. ಹಳ್ಳಿಕಾರ್ ಹಸು ತಳಿಯನ್ನು ಪ್ರಚಾರ ಮಾಡಿದ್ದರು. ಅದಕ್ಕಾಗಿ ಎಲ್ಲೆಲ್ಲೋ ಸುತ್ತಾಡಿದ್ದರು. ಆದರೆ ಜನ ಸಾಮಾನ್ಯರಿಗೆ ಇದರ ಬಗ್ಗೆ ಅರಿವು ಇರಲಿಲ್ಲ. ಆದರೆ ಯಾವಾಗ ಒಂದೊಂದಾಗಿ ಇವರ ಬಗ್ಗೆ ವಿಚಾರ ಗೊತ್ತಾಗುತ್ತಾ ಹೋಯಿತೋ ಏಕಾಏಕಿ ಸ್ಟಾರ್ ಆದರು. ವರ್ತೂರು ಸಂತೋಷ್ ಕನ್ನಡ ನಾಡಿನ ಮನೆ ಮಗನಾದರು.
ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಸಂತೋಷ್ ಹುಟ್ಟು ಹಾಕಿದ್ದ ಅಥವಾ ಬೇರೆಯವರು ಹುಟ್ಟುಹಾಕಿದ್ದಕ್ಕೆ ಕುಗ್ಗಿ ಹೋದ ಏಕೈಕ ಸ್ಪರ್ಧಿ ಅಂದರೆ ಅದು ವರ್ತೂರು ಸಂತೋಷ್. ಪಕ್ಕಾ ಹಳ್ಳಿಗಾಡಿನ ಪ್ರತಿಭೆ. ಹಿಂದೊಂದು ಮುಂದೊಂದು ಗೊತ್ತಿರದ ಜೀವ. ಅದೇ ಕಾರಣಕ್ಕೆ ಜೈಲು ಸೇರಿ ಬಂದರು. ಬಿಗ್ಬಾಸ್ ಮನೆಯಿಂದ ನೇರವಾಗಿ ಜೈಲಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿ ಆಯಿತು. ಸಂತೋಷ್ ಕಣ್ಣೀರಿಟ್ಟರು. ಅದಕ್ಕೆಲ್ಲಾ ಕಾರಣ ಹುಲಿ ಉಗುರಿನ ಪೆಂಡೆಂಟ್ ಇರುವ ಸರ ಧರಿಸಿದ್ದು.
ಮದುವೆ (Wedding) ಎನ್ನುವುದು ವೈಯಕ್ತಿಕ ವಿಷಯ. ಆದರೂ ಮನೆಯಲ್ಲಿದ್ದಾಗ ಇವರು ಅದಕ್ಕೂ ಸಮಜಾಯಿಷಿ ಕೊಟ್ಟಿದ್ದರು. ಈಗಲೂ ನನ್ನ ಮಾತು ಒಪ್ಪಿ ಬಂದರೆ ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ ಎಂದಿದ್ದರು. ಅದಕ್ಕೆ ಇದೀಗ ಉತ್ತರಿಸಿದ್ದಾರೆ. ಆದರೆ ಎಲ್ಲೂ ಯಾರ ಮೇಲೂ ಆರೋಪ ಹೊರಿಸಿಲ್ಲ. ಮುಂದಿನ ದಿನಗಳಲ್ಲಿ ಇದನ್ನೆಲ್ಲ ಮರೆತು ಹಳ್ಳಿಕಾರ್ ರೇಸ್ ನಡೆಸಲು ತೀರ್ಮಾನಿಸಿದ್ದಾರೆ. ಯಾರ್ಯಾರು ಹಳ್ಳಿಕಾರ್ ಸಂತೋಷ್ಗೆ ಅವಮಾನ ಮಾಡಿದ್ದರೋ ಅವರಿಗೆ ಈ ಮೂಲಕ ಉತ್ತರಿಸಿಲು ಸಜ್ಜಾಗಿದ್ದಾರೆ. ಈ ಸಮಾರಂಭಕ್ಕೆ ಸುದೀಪ್ ಕೂಡ ಹಾಜರಿ ಹಾಕುವುದ್ದಕ್ಕೆ ಮಾತುಕತೆ ಆಗಿದೆ.
ಇದೀಗ ಎಲ್ಲವೂ ಮುಗಿದಿದೆ. ಹಳೆಯದನ್ನು ಮರೆತು ಹೊಸ ಬದುಕು ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿಯೇ ಅವಕಾಶ ಸಿಕ್ಕರೆ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಲು ನಿಶ್ಚಯ ಮಾಡಿದ್ದಾರೆ. ಹಾಗಂತ ಹೀರೋ ಆಗುವ ಆಸಕ್ತಿ ಇಲ್ಲ. ಆಗಾಗ ಜನರಿಗೆ ಮುಖ ತೋರಿಸುತ್ತೇನೆ ಎನ್ನುತ್ತಾರೆ. ಅದಕ್ಕಾಗಿ ಯಾರ ಹಿಂದೆಯೂ ಅವಕಾಶ ಬೇಡಿಕೊಂಡು ಹೋಗಲ್ಲ. ಅದಾಗಿಯೇ ಬಂದರೆ ಬಿಡುವುದಿಲ್ಲ.