ಬೆಂಗಳೂರು: ಸಂಸದ ಡಿ.ಕೆ.ಸುರೇಶ್ ಅವರು ರಾಜಕೀಯ ಪ್ರೇರಿತವಾಗಿ ಬೇರೆ ರಾಷ್ಟ್ರ, ಇನ್ನೊಂದು, ಮತ್ತೊಂದು ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ತಿಳುವಳಿಕೆ ಕೊರತೆ ಇದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತೀವ್ರ ವಾಗ್ದಾಳಿ ನಡೆಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ” ಕಾಂಗ್ರೆಸ್ ಪಕ್ಷದವರು ಅಂಕಿಅಂಶ ಆಧಾರದಲ್ಲಿ ಮಾತನಾಡಬೇಕು” ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳೇ ನಿಮ್ಮ ಹಣಕಾಸು ಸಚಿವರು. ಒಂದು ಬಾರಿಯಾದರೂ ಜಿಎಸ್ಟಿ ಕೌನ್ಸಿಲ್ ಸಭೆಗೆ ಹೋಗಿದ್ದಾರಾ? ಅವರು ಹಣಕಾಸು ಸಚಿವರಾಗಿ ರಾಜ್ಯವನ್ನು ಪ್ರತಿನಿಧಿಸುತ್ತಿಲ್ಲ ಎಂದು ಟೀಕಿಸಿದರು. ಹಿಂದಿನ ಅವಧಿ ಮತ್ತು ಈ ಅವಧಿಯಲ್ಲೂ ಆ ಕೆಲಸ ಮಾಡಿಲ್ಲ ಎಂದರು. ಬಿಜೆಪಿ ಕೇಂದ್ರ ಸರಕಾರವು ವಿಕೇಂದ್ರೀಕರಣ ಮೂಲಕ ವಿವಿಧ ರಾಜ್ಯಗಳಿಗೆ ಹಣಕಾಸು ಹಂಚಿಕೆ ಮಾಡಿದೆ. ಯುಪಿಎ ಸರಕಾರದಲ್ಲಿ ಎಷ್ಟು ಹಣ ಕೊಟ್ಟಿದ್ದರು; ನಮ್ಮ ಸರಕಾರದಲ್ಲಿ ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ಗಮನಿಸಿ ಮಾತನಾಡಬೇಕಿತ್ತು ಎಂದು ಸವಾಲೆಸೆದರು.