ಮೈಸೂರು: ಪತ್ನಿಯ ಶೀಲ ಶಂಕಿಸಿ 12 ವರ್ಷಗಳ ಕಾಲ ಪತ್ನಿಯನ್ನ ದಿಗ್ಬಂಧನದಲ್ಲಿ ಇರಿಸಿದ್ದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಹೆಚ್.ಮಟಕೆರೆ ಗ್ರಾಮದಲ್ಲಿ ನಡೆದಿದೆ. ಗೃಹಿಣಿ ಸಹನಾಳನ್ನು ಪತಿ ಸಣ್ಣಾಲಯ್ಯ 12 ವರ್ಷದಿಂದ ಅಜ್ಞಾತವಾಸದಲ್ಲಿರಿಸಿರುವ ಘಟನೆ ನಡೆದಿದೆ. ಅಂದಹಾಗೆ, ಸಣ್ಣಾಲಯ್ಯನಿಗೆ ಸಹನಾ 3ನೇ ಪತ್ನಿ. ಸಣ್ಣಾಲಯ್ಯ ಸ್ವಭಾವತಃ ಅನುಮಾನದ ಪಿಶಾಚಿ. ಅದರಿಂದಾಗಿಯೇ ಆತನ ಇಬ್ಬರು ಪತ್ನಿಯರು ಬೇಸತ್ತು ದೂರವಾಗಿದ್ದರು.
12 ವರ್ಷದ ಹಿಂದೆ ಸಹನಾ ಸಣ್ಣಾಲಯ್ಯನನ್ನು ವಿವಾಹವಾಗಿದ್ದರು. ಸಹನಾ – ಸಣ್ಣಾಲಯ್ಯ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈಗ 3ನೇ ಪತ್ನಿಯಾದ ಸಹನಾ ಮೇಲೂ ತನ್ನ ಅನುಮಾನದ ದೃಷ್ಟಿ ಹರಿಸಿದ್ದ ಆತ, ಮನೆಯಲ್ಲಿ ದಿಗ್ಬಂಧನ ಮಾಡಿ, ಮನೆ ಭದ್ರಪಡಿಸಿ ಯಾರೊಂದಿಗೂ ಮಾತನಾಡದಂತೆ ಎಚ್ಚರ ವಹಿಸಿದ್ದ. ಇದು ದಂಪತಿಗಳಿಬ್ಬರ ನಡುವೆ ಕಲಹಕ್ಕೆ ಕಾರಣವಾಗಿ, ಹಲವಾರು ಬಾರಿ ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ನಡೆದಿತ್ತು.
ಸಣ್ಣಾಲಯ್ಯ ತಪ್ಪು ತಿದ್ದಿಕೊಳ್ಳದೇ ತನ್ನ ಚಾಳಿ ಮುಂದುವರೆಸುತ್ತಿದ್ದ. ವಿಷಯ ತಿಳಿದು ವಕೀಲ ಸಿದ್ದಪ್ಪಾಜಿ, ಸಾಂತ್ವನ ಕೇಂದ್ರದ ಜಶೀಲ, ಎ.ಎಸ್.ಐ ಸುಭಾನ್ ಸೇರಿ ಇತರರ ತಂಡ ಸಹನಾ ಮನೆಗೆ ಭೇಟಿ ನೀಡಿ ರಾತ್ರೋರಾತ್ರಿ ಸಹನಾ ಮತ್ತು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಮನೆಯ ಬೀಗ ಮತ್ತು ಬಾಗಿಲು ಮುರಿದು ಮಹಿಳೆಯನ್ನು ರಕ್ಷಿಸಿದ್ದು, ಮಹಿಳೆ ಒಪ್ಪಿಗೆಯಂತೆ ತವರು ಮನೆಯಲ್ಲಿ ಆಶ್ರಯ ಕೊಡಿಸಿದ್ದಾರೆ. ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.