ಮಂಡ್ಯ:- ಮಂಡ್ಯ ಕೆರಗೋಡಿನಲ್ಲಿ ನಿಷೇಧಾಜ್ಞೆ ಮುಂದುವರಿದಿದ್ದು, ರಾಜ್ಯದ ಹಲವೆಡೆ ಧ್ವಜ ವಿವಾದ ವ್ಯಾಪಿಸಿದೆ.
ಕೆರಗೋಡು ಗ್ರಾಮದಲ್ಲಿ ಸದ್ಯ 200ಕ್ಕೂ ಹೆಚ್ಚು ಪೊಲೀಸರು ಮೊಕ್ಕಾಂ ಹೂಡಿದ್ದು, ನಿಷೇಧಾಜ್ಞೆ ಮುಂದುವರೆದಿದೆ. ಅತ್ತ ಪೊಲೀಸರ ಲಾಠಿ ಚಾರ್ಜ್ನಲ್ಲಿ ಗಾಯಗೊಂಡವರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಬುಧವಾರ ಭೇಟಿ ನೀಡಿ, ಧೈರ್ಯ ಹೇಳಿದ್ದಾರೆ.
ಪ್ರತಿಭಟನೆ ವೇಳೆ ಪೊಲೀಸರು ಕರೆದೊಯ್ದಿದ್ದ 9ನೇ ತರಗತಿ ಬಾಲಕನ ಮನೆಗೂ ಅವರು ತೆರಳಿದ್ದಾರೆ. ಈ ವೇಳೆ, ಅವರನ್ನ ತಡೆದ ಪೋಷಕರು ಯಾರೂ ಬರೋದು ಬೇಡ. ಯಾವ ಧ್ವಜವಾದ್ರೂ ಹಾರಾಡ್ಲಿ ನಮಗೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 9 ರಂದು ನಡೆದ ಘಟನೆ ಖಂಡಿಸಿ ಬಜರಂಗದಳ ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟಿದೆ. ನಾಳೆಯಿಂದ ಮನೆ ಮನೆ ಮೇಲೆ ಹನುಮ ಹಾಗೂ ಕೇಸರಿ ಧ್ವಜ ಹಾರಾಟ ಅಭಿಯಾನಕ್ಕೂ ತೀರ್ಮಾನಿಸಿದೆ. ಮತ್ತೊಂದೆಡೆ, ಈ ಘಟನೆ ಖಂಡಿಸಿ ಫೆಬ್ರವರಿ 7 ರಂದು ಸಮಾನ ಮನಸ್ಕ ವೇದಿಕೆ ಮಂಡ್ಯ ನಗರ ಬಂದ್ಗೆ ಕರೆಕೊಟ್ಟಿದೆ.
ಮಂಡ್ಯದಲ್ಲಿ ಕಿಚ್ಚು ಹಚ್ಚಿದ್ದ ಧ್ವಜ ದಂಗಲ್ ಚಿಕ್ಕಬಳ್ಳಾಪುರ ಜಿಲ್ಲೆಗೂ ಕಾಲಿಟ್ಟಿತೇ ಎಂಬ ಅನುಮಾನ ಮೂಡಿದೆ. ಏಕೆಂದರೆ, ಚಿಕ್ಕಬಳ್ಳಾಪುರ ನಗರದ ದೊಡ್ಡಭಜನೆಯಲ್ಲಿ ಮನೆ ಕಾಂಪೌಂಡ್ಗೆ ಧ್ವಜಸ್ತಂಭ ನಿರ್ಮಿಸಿ ಹಸಿರು ಬಾವುಟ ಹಾರಿಸಲಾಗಿದೆ. ಇದನ್ನ ಗಮನಿಸಿದ ಸ್ಥಳೀಯರು ಕೂಡಲೇ ಹಸಿರು ಬಾವುಟ ತೆರವುಗೊಳಿಸಬೇಕು ಎಂದು ಆಗ್ರಹಿಸಿ ದೂರು ನೀಡಿದ್ದಾರೆ.
ಕೆರಗೋಡಿನ ಧ್ವಜ ವಿವಾದದ ಬೆನ್ನಲ್ಲೇ ಕೋಲಾರದಲ್ಲೂ ವಿವಾದದ ಕಿಡಿ ಹೊತ್ತಿದೆ. ಕೋಲಾರದ ಕ್ಲಾಕ್ ಟವರ್ ಮೇಲೆ ಹಾಕಲಾಗಿರುವ ಅರ್ಧ ಚಂದ್ರಾಕೃತಿ ಹಾಗೂ ನಕ್ಷತ್ರ ಆಕೃತಿ ಚಿಹ್ನೆ ತೆರವಿಗೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.