ಬಿಗ್ ಬಾಸ್ ಕನ್ನಡದ (Bigg Boss Kannada 10) ಈ ಸೀಸನ್ನಲ್ಲಿ ಅತ್ಯಂತ ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದಿರುವ ಸ್ಪರ್ಧಿ ವರ್ತೂರು ಸಂತೋಷ್. ಕೆಲವು ಕಹಿ ಘಟನೆಗಳು ನಡೆದಾಗಲೂ, ಮತ್ತೆ ಅದರ ನೋವಿನಿಂದ ಹೊರಬಂದು ಆಡಿದ ವರ್ತೂರು (Varthur Santhosh) ಅವರು 4ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಜಿಯೋ ಸಿನಿಮಾ ನಡೆಸಿದ ಸಂದರ್ಶನದಲ್ಲಿ ಅವರು ಆಡಿದ ಮಾತುಗಳು ಹೀಗಿವೆ
ನಮಸ್ಕಾರ ನನ್ನ ಹೆಸರು ಸಂತೋಷ್ ಕುಮಾರ್. ವರ್ತೂರು ಸಂತೋಷ್ ಮತ್ತು ಹಳ್ಳಿಕಾರ್ ಸಂತೋಷ್ ಅಂತ ಕರೀತಾರೆ. ನನಗಂತೂ ರಿಯಾಲಿಟಿ ಶೋಗಳ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೆ ಬಿಗ್ ಬಾಸ್ ಅಂದರೆ ವ್ಯಕ್ತಿತ್ವದ ಆಟ. ಅಂದರೆ ನಮ್ಮ ವ್ಯಕ್ತಿತ್ವವನ್ನು ನಾವು ಹೇಗೆ ತೋರಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಒಂದು ರಿಯಾಲಿಟಿ ಶೋ ಕಂಪ್ಲೀಟ್ ಆಗುವುದು ಡೇ ಒಂದರಿಂದ ಲಾಸ್ಟ್ ವೀಕ್ವರೆಗೆ ಇರುವುದು. ವೀಕೆಂಡ್ನಲ್ಲಿ ಎಲಿಮಿನೇಟ್ ಆಗುವುದು, ಮಿಡ್ ವೀಕ್ ಎಲಿಮಿನೇಟ್ ಆಗುವುದೆಲ್ಲ ಇನ್ನೊಂದು ರೀತಿ. ಆದರೆ ಇಡೀ ಸೀಸನ್ ಕಂಪ್ಲೀಟ್ ಮಾಡುವುದು ಬೆರಳೆಣಿಕೆಯಷ್ಟು ಸ್ಪರ್ಧಿಗಳು. ಅವರಲ್ಲಿ ನಾನು ಅವರಲ್ಲಿ ಒಬ್ಬನಾಗಿದ್ದೇನೆ.
ಸೋಲು- ಗೆಲುವು ಎರಡನ್ನೂ ಒಂದೇ ರೀತಿ ತಗೊಬೇಕು. ಒಬ್ಬರು ಸೋತಾಗಲೇ ಗೆಲ್ಲಬೇಕು ಅನ್ನೋ ಛಲ ಬಂದಿರೋದು. ನಾನು ಈ ಸೀಸನ್ನ ಗೆಲ್ಲದೇ ಇರಬೋದು. ಆದರೆ ಕರ್ನಾಟಕದ ಪ್ರತಿಯೊಬ್ಬರ ಮನೆಮಗನಾಗಿ ಮನಸ್ಸು ಗೆದ್ದಿದ್ದೇನೆ. ಅದರ ಬಗ್ಗೆ ಖುಷಿಯಿದೆ. ನಾನು ಜನರಿಂದ ಬೆಳೆದವನು, ಜನರಿಗೋಸ್ಕರ ಜನರ ಜೊತೆಗೇ ಇರೋನು.
ನಾನು ಈ ಬಿಗ್ ಬಾಸ್ ಮನೆಯಲ್ಲಿ, ಏನಾದ್ರೂ ಹೊರಗಡೆ ತೆಗೆದುಕೊಂಡು ಹೋಗ್ತಿದೀನಿ ಅಂದ್ರೆ ಅದು ಫ್ರೆಂಡ್ಶಿಪ್. ಎಲ್ಲ ಸ್ನೇಹಿತರಿಂದಲೂ ಅದನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಆದರೆ ತುಕಾಲಿ ಸಂತೋಷ್ ಅವರ ಕಡೆಯಿಂದ ಒಂದು ಸಹೋದರ ಸ್ನೇಹವನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ಯಾಕೆಂದರೆ ನನ್ನ ನಗು, ದುಃಖ ಎಲ್ಲವನ್ನೂ ಅವರ ಜೊತೆಗೆ ಹಂಚಿಕೊಂಡಿದ್ದೀನಿ. ಅದಕ್ಕೆ ವಿಶೇಷ ಸ್ಥಾನವಿದೆ. ಮನೆಯ ಸದಸ್ಯರು, ಸುದೀಪಣ್ಣ ಅಷ್ಟೇ ಏಕೆ, ಬಿಗ್ ಬಾಸ್ ಕೂಡ ನಮ್ಮ ಸ್ನೇಹದ ಮೇಲೆ ಯಾರ ಕಣ್ಣೂ ಬೀಳದೆ ಇರಲಿ ಎಂದು ಹಾರೈಸಿದರು.