ವಿಜಯಪುರ:- ವಿಜಯಪುರ ನಗರದ ಜನರಿಗೆ ಸಂಕಷ್ಟ ಬಂದಿದ್ದು, ಸದ್ಯ ನಗರ ಭಾಗದ ಜನರು ವಿಷಾನಿಲ ಉಸಿರಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿಜಯಪುರ ನಗರ ಭಾಗದ ಜನರಿಗೆ ಇದೀಗ ಭಯ ಆವರಿಸಿದೆ. ಕಳೆದ 10 ದಿನದಿಂದ ಇಡೀ ನಗರದ ಅರ್ಧ ಭಾಗದ ಪ್ರದೇಶಗಳಲ್ಲಿ ವಿಷಾನಿಲ ವ್ಯಾಪಿಸಿದೆ. ನಗರದ ಹೊರ ಭಾಗದಲ್ಲಿರೋ ಮಹಾನಗರ ಪಾಲಿಕೆಯ ಘನತ್ಯಾಜ್ಯ ಸಂಸ್ಕರಣ ಹಾಗೂ ವಿಲೇವಾರಿ ಘಟಕದಲ್ಲಿರೋ ಮಿಶ್ರಣವಾಗಿರೋ ಕಸದ ರಾಶಿಗೆ ಬೆಂಕಿ ತಗುಲಿ ವಿಷಾನಿಲ ಹೊರ ಸೂಸುತ್ತಿದೆ. ಘನತ್ಯಾಜ್ಯ ಸಂಸ್ಕರಣ ಹಾಗೂ ವಿಲೇವಾರಿ ಘಟಕಲ್ಲಿ 15000 ಟನ್ ಸಂಗ್ರಹವಾಗಿರೋ ಮಿಶ್ರಕಸದ ರಾಶಿ ಬಿದ್ದಿದೆ. ಇದಕ್ಕೆ ಪಕ್ಕದಲ್ಲಿರೋ ಬಯೋ ಮೆಡಿಕಲ್ ವೇಸ್ಟ್ ನಿಂದ ಬೆಂಕಿ ಕಸದ ರಾಶಿಗೆ ಹಚ್ಚಿ ಇಲ್ಲಿರೋ ಕಸದ ರಾಶಿ ಹೊತ್ತಿ ಉರಿಯುತ್ತಿದೆ. ಕಸದ ರಾಶಿಯ ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ್ದು ವಿಜಯಪುರ, ಇಂಡಿ ಹಾಗೂ ಮಹಾರಾಷ್ಟ್ರದ ಅಕ್ಕಲಕೋಟ ಪಟ್ಟಣ ಸೇರಿದಂತೆ ಇತರೆಡೆ ಸಂಪರ್ಕ ಕಲ್ಪಿಸಿರೋ ರಸ್ತೆಯಲ್ಲಿ ಸಂಚಾರ ಮಾಡದಷ್ಟು ಹೊಗೆ ಆವರಿಸಿದೆ.
ನಿತ್ಯ ಸಾವಿರಾರು ವಾಹನಗಳು ವಾಹನ ಸವಾರರು ಬೈಕ್ ಸವಾರರು ಕಷ್ಟಪಟ್ಟು ಇಲ್ಲಿ ವಾಹನ ಚಾಲನೆ ಮಾಡಬೇಕಿದೆ. ಮೂಗಿಗೆ ಮಾಸ್ಕ್ ಹಾಕಿಕೊಂಡು ವಾಹನ ಓಡಿಸೋದು ಇಲ್ಲಿ ಮಾಮೂಲಾಗಿದೆ. ದಟ್ಟ ಹೊಗೆಯ ಕಾರಣದಿಂದ ಅಪಘಾತಗಳು ಆಗುತ್ತಿದ್ದು, ಅನೇಕ ಜನರು ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ.
ಕಸದ ರಾಶಿ ಸಂಗ್ರಹಕ್ಕೆ ಹೊತ್ತಿರೋ ಬೆಂಕಿಗೆ ನೀರು ಸಿಂಪರಣೆ ಮಾಡಲಾಗಿದ್ದರೂ ಒಳಗಿನ ಬೆಂಕಿ ಆರಿಲ್ಲ. ಬದಲಾಗಿ ದಟ್ಟ ಹೊಗೆಗೆ ಕಾರಣವಾಗಿದೆ. ಈ ಕಾರಣದಿಂದ ಮಿಥೇನ್ ಉತ್ಪಾದನೆ ಆಗುತ್ತಿದ್ದು ಜನರ ಆರೋಗ್ಯಕ್ಕೆ ಬಾಧಕವಾಗಿದೆ. ಮಿಥೇನ್ ಒಂದು ರೀತಿಯಲ್ಲಿ ಭಾರಿ ವಿಷ ಅನಿಲ ಅಲ್ಲಾದರೂ ಅದು ಆಮ್ಲಜನಕದ ಪ್ರಮಾಣ ಕಡಿಮೆಗೊಳಿಸಿ ಉಸಿರಾಟ ನಿಲ್ಲಿಸುವ ಕೆಲಸ ಮಾಡುತ್ತದೆ. ತಾಪಮಾನವನ್ನು ಹೆಚ್ಚಿಸುತ್ತದೆ. ಇದು ರಸ್ತೆಯಲ್ಲಿ ಸಂಚಾರ ಮಾಡುವ ರಸ್ತೆ, ಕೈಗಾರಿಕೆ ಪ್ರದೇಶ, ಕಿರಾಣಿ ಮಾರುಕಟ್ಟೆ, ಸುತ್ತಮುತ್ತಲ ವಾಸಿಗಳ ಹಾಗೂ ನಗರ ವಾಸಿಗಳ ಆರೋಗ್ಯದಲ್ಲಿ ಏರುಪೇರು ಮಾಡುತ್ತಿದೆ. ಇಲ್ಲಿನ ದಟ್ಟ ಹೊಗೆಯಿಂದ ಜನರು ಮಾತ್ರ ರೋಸಿ ಹೋಗಿದ್ಧಾರೆ