ಬೆಂಗಳೂರು:- ಪೀಣ್ಯ ಫ್ಲೈಓವರ್ ಘನ ವಾಹನ ಸಂಚಾರಕ್ಕೂ ಶೀಘ್ರ ಮುಕ್ತವಾಗಲಿದೆ. ಈ ಸಂಬಂಧ ಶುಕ್ರವಾರ ಅಧಿಕಾರಿಗಳ ಸಭೆ ಜರುಗಲಿದೆ.
ಫ್ಲೈಓವರ್ನ ಮೂರು ವ್ಯಾಪ್ತಿಯಲ್ಲಿರುವ ಪ್ರಿಸ್ಟ್ರೆಸ್ಡ್ ಕೇಬಲ್ಗಳು ತುಕ್ಕು ಹಿಡಿದಿರುವುದು ಬೆಳಕಿಗೆ ಬಂದು ಘನ ವಾಹನ ಸಂಚಾರ ಅಸಾಧ್ಯವಾದ ಕಾರಣ ನಿಷೇಧ ನಿರ್ಧಾರ ಕೈಗೊಳ್ಳಲಾಗಿತ್ತು. ಇದು ಸರ್ವೀಸ್ ರಸ್ತೆಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿತ್ತು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳೆದ ವರ್ಷ 38.5 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಕೇಬಲ್ಗಳನ್ನು ಹೆಚ್ಚುವರಿಯಾಗಿ ಸೇರಿಸಲು ಮತ್ತು ಫ್ಲೈಓವರ್ ಅನ್ನು ಬಲಪಡಿಸಲು ಕಾಮಗಾರಿ ಆರಂಭಿಸಿತ್ತು. ಫ್ಲೈಓವರ್ನಲ್ಲಿ 120 ಸ್ಪ್ಯಾನ್ಗಳೊಂದಿಗೆ, ಎನ್ಎಚ್ಎಐ 240 ಪ್ರಿಸ್ಟ್ರೆಸ್ಡ್ ಕೇಬಲ್ಗಳನ್ನು ಸೇರಿಸಿದ್ದು, ಅದನ್ನು ಬಲಪಡಿಸಿದೆ
ಲೋಡ್ ಟೆಸ್ಟಿಂಗ್ ಫಲಿತಾಂಶಗಳು ತೃಪ್ತಿಕರವಾಗಿವೆ ಮತ್ತು ಮುಂದಿನ ಅಗತ್ಯ ಕ್ರಮಕ್ಕಾಗಿ ವರದಿಯನ್ನು ಎನ್ಎಚ್ಎಐ ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಚಂದ್ರ ಕಿಶನ್ ಜೆಎಂ ಹೇಳಿದ್ದಾರೆ. ಇವರು ಮೇಲ್ಸೇತುವೆ ಕುರಿತು ರಚಿಸಲಾಗಿರುವ ನಾಲ್ಕು ಸದಸ್ಯರ ತಜ್ಞರ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ.
ಪ್ರೊ ಕಿಶನ್ ಪ್ರಕಾರ, ಸಮಿತಿಯ ಸದಸ್ಯರು ಮತ್ತು ಎನ್ಎಚ್ಎಐ ಅಧಿಕಾರಿಗಳು ಫೆಬ್ರವರಿ 2 ರಂದು ಸಭೆ ಸೇರಿ ವರದಿಯ ಬಗ್ಗೆ ಚರ್ಚಿಸಲು ಮತ್ತು ಘನ ವಾಹನಗಳ ಸಂಚಾರಕ್ಕೆ ಫ್ಲೈಓವರ್ನಲ್ಲಿ ಅವಕಾಶ ನೀಡುವ ಬಗ್ಗೆ ನಿರ್ಧರಿಸುವ ಸಾಧ್ಯತೆಯಿದೆ.