ಕೊಳ್ಳೇಗಾಲ:- ಮಂಡ್ಯದ ಕೆರೆಗೋಡಿನ ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯವರು ಧರ್ಮದ ಆಧಾರದಲ್ಲಿ ಜನರನ್ನು ಪ್ರಚೋದಿಸಲು ಹೊರಟಿದ್ದಾರೆ. ಸಮಾಜದಲ್ಲಿ ಘರ್ಷಣೆ, ಹಿಂಸೆ ಸೃಷ್ಟಿಸಿ ಜನರನ್ನು ಭಾವನಾತ್ಮಕವಾಗಿ ಕೆರಳಿಸುವುದೇ ಅವರ ಕಾರ್ಯಸೂಚಿ’ ಎಂದರು.
ಅಲ್ಲಿ ಅನುಮತಿ ಪಡೆದಿರುವ ಉದ್ದೇಶವೇ ಬೇರೆ. ಆಗುತ್ತಿರುವುದೇ ಬೇರೆ. ಧರ್ಮದ ವಿಚಾರ ಪ್ರಸ್ತಾಪಿಸಿ ದೇಶದ್ರೋಹಿ, ಧರ್ಮವಿರೋಧಿ, ಪಾಕಿಸ್ತಾನಕ್ಕೆ ಹೋಗಿ ಎಂದೆಲ್ಲ ಹೇಳಿ ಬಿಜೆಪಿ ಜನರನ್ನು ಕೆರಳಿಸುತ್ತಿದೆ’ ಎಂದು ಟೀಕಿಸಿದರು.
‘ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೂ ಹಿಜಾಬ್, ಕೇಸರಿ ಶಾಲು, ಟಿಪ್ಪು ಸುಲ್ತಾನ್ ವಿಚಾರಗಳನ್ನಿಟ್ಟುಕೊಂಡೇ ರಾಜಕಾರಣ ಮಾಡಿದರು. ಭಾವನೆಗಳನ್ನು ಬಳಸಿಕೊಂಡು ಮತ ಪಡೆಯಬೇಕೆಂಬ ಅವರ ಉದ್ದೇಶವನ್ನು ಜನ ಅರಿಯಬೇಕು’ ಎಂದರು.
ನಾವೇನು ಹಿಂದೂ ವಿರೋಧಿಗಳಾ? ನಮ್ಮ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮಾತಿನಂತೆ, ಎಲ್ಲರನ್ನೂ ಪ್ರೀತಿಸಬೇಕು. ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿಯವರೊಂದಿಗೆ ಹೋಗಿರುವುದರಿಂದ ಹಿಂದೂಗಳ ಬಗ್ಗೆ ಅವರಿಗೆ ಹೆಚ್ಚು ಪ್ರೀತಿ ಬಂದಿರಬಹುದು’ ಎಂದು ವ್ಯಂಗ್ಯವಾಡಿದರು.