ದಾವಣಗೆರೆ:- ಚನ್ನಗಿರಿ ತಾಲೂಕಿನ ಗುಡ್ಡದ ಕೊಮರನಹಳ್ಳಿ ಗ್ರಾಮದಲ್ಲಿ ಮದ್ಯ ಸೇವನೆಗೆ ಪತ್ನಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಪತಿಯೇ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತ್ನಿಯನ್ನ ಹಲ್ಲೆ ಮಾಡಿರುವ ಘಟನೆ ಜರುಗಿದೆ.
ಹಿರಿಯೂರು ತಾಲೂಕು ಇದ್ದಲ ನಾಗೇನಹಳ್ಳಿ ಗ್ರಾಮದ ಕದರಪ್ಪ (60) ಹಲ್ಲೆ ನಡೆಸಿದ ಆರೋಪಿ. ಪತಿ ಮಾಡಿರುವ ಹಲ್ಲೆಯಿಂದ ತೀವ್ರ ಗಾಯಗೊಂಡ ಮಹಿಳೆ ಸಾಕಮ್ಮ (55) ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಸ್ತುತ ಅವರು ಕೋಮಾ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.
ದಂಪತಿ ಹಲವು ವರ್ಷಗಳಿಂದ ಬಡಗೊಲ್ಲರಹಟ್ಟಿ, ಸೀಗೆಹಟ್ಟಿ ಗ್ರಾಮದವರ ಜೊತೆಗೂಡಿ ಕುರಿಗಳನ್ನು ಮೇಯಿಸುತ್ತಿದ್ದರು. ಅದರಂತೆಯೇ ಕುರಿಗಳನ್ನು ಮೇಯಿಸಲು ಚನ್ನಗಿರಿ ತಾಲೂಕಿನ ಗುಡ್ಡದ ಕೊಮರನಹಳ್ಳಿ ಗ್ರಾಮ ಸೇರಿ ಸುತ್ತಲ ಗ್ರಾಮಗಳಲ್ಲಿ ವಾರದಿಂದ ತೋಟವೊಂದರಲ್ಲಿ ತಂಗಿದ್ದರು. ಮದ್ಯ ವ್ಯಸನಿಯಾಗಿದ್ದ ಆರೋಪಿ ಕದರಪ್ಪ, ಹಣ ನೀಡುವಂತೆ ಪತ್ನಿ ಸಾಕಮ್ಮನನ್ನು ಪದೆ ಪದೇ ಪೀಡಿಸುತ್ತಿದ್ದನು
ಪತ್ನಿ ಹಣ ನೀಡಲು ನಿರಾಕರಿಸಿದ್ದಕ್ಕೆ ಇನ್ನಷ್ಟು ಕೋಪಗೊಂಡ ಕದರಪ್ಪ ಅಲ್ಲೇ ಇದ್ದ ಕಲ್ಲನ್ನು ತಲೆಮೇಲೆ ಎತ್ತಿಹಾಕಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾಕಮ್ಮ ಅವರನ್ನು ಕಂಡ ಬಡಗೊಲ್ಲರಹಟ್ಟಿ ಮತ್ತು ಸೀಗೆಹಟ್ಟಿ ಕುರಿ ಕಾಯುವವರು ತಕ್ಷಣವೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾಕಮ್ಮ ಮಗ ದಯಾನಂದ ಬಸವಾಪಟ್ಟಣ ಪೊಲೀಸ್ ಠಾಣೆಗೆ ತಂದೆ ಮೇಲೆ ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಆರೋಪಿ ಕದರಪ್ಪನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.