ಹುಬ್ಬಳ್ಳಿ: ಕಳೆದ ಮೂವತ್ತು-ನಲವತ್ತು ವರ್ಷಗಳಿಂದ ಕಟ್ಟಿ ಬೆಳೆಸಿದ್ದ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಕದ ತಟ್ಟಿದ್ದ ಜಗದೀಶ ಶೆಟ್ಟರ ಅವರನ್ನು ವಾಪಸ್ ಬಿಜೆಪಿಗೆ ಕರೆತರುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪಾತ್ರ ದೊಡ್ಡದಿದೆ ಎಂದು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ ಶೆಟ್ಟರ ಅವರನ್ನು ಯಾವಾಗ ಮರಳಿ ಬಿಜೆಪಿಗೆ ಕರೆತರುವ ಪ್ರಯತ್ನಗಳು ನಡೆದವೋ ಅಂದಿನಿAದ ಎಲ್ಲ ವಿದ್ಯಮಾನಗಳು ಜೋಶಿ ಅವರ ಗಮನಕ್ಕೆ ಇತ್ತು. ಪ್ರಹ್ಲಾದ ಜೋಶಿ ಮತ್ತು ಜಗದೀಶ ಶೆಟ್ಟರ ಹಲವು ವರ್ಷಗಳಿಂದ ಪಕ್ಷದಲ್ಲಿ ಜೋಡೆತ್ತುಗಳ ರೀತಿ ಕಾರ್ಯ ನಿರ್ವಹಿಸಿದ್ದಾರೆ. ಮುಂದೆಯೂ ಅವರು ಪಕ್ಷವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವ ಕೆಲಸ ಮಾಡುತ್ತಾರೆ ಎಂದರು.
ಜಗದೀಶ ಶೆಟ್ಟರ ಘರ್ ವಾಪ್ಸಿ ಆಗದಿದ್ದರೂ ನಾನು ಬಿಜೆಪಿ ತೊರೆಯುತ್ತಿರಲಿಲ್ಲ. ಪ್ರಹ್ಲಾದ ಜೋಶಿ, ಮಹೇಶ ಟೆಂಗಿನಕಾಯಿ ಅವರ ಜೊತೆ ಮಾತನಾಡಿದ್ದೇನೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ನಮ್ಮ ಗುರಿ. ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು. ಜೋಶಿ ಅವರು ಎಲ್ಲರನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದು ಅಂದೂ ಹೇಳಿದ್ದೆ. ಈಗಲೂ ಹೇಳುತ್ತೇನೆ. ಅವರಿವರೆನ್ನದೇ ಎಲ್ಲರನ್ನೂ ಗಣೆನೆಗೆ ತೆಗೆದುಕೊಂಡು ಜೋಶಿ ಅವರು ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದ ಮುನೇನಕೊಪ್ಪ,
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ ಆಗಿದೆ ಅಂತ ನಾನು ಯಾವತ್ತು ಹೇಳಿಲ್ಲ. ತಮ್ಮ ಸಹೋದರನಿಗೆ ಅನ್ಯಾಯ ಆಗಿದೆ ಎಂಬ ಕಾತಣಕ್ಕೆ ಪ್ರದೀಪ ಶೆಟ್ಟರ್ ಅತೃಪ್ತಿ ವ್ಯಕ್ತಪಡಿಸಿದ್ದರು. ಶೆಟ್ಟರ ಪಕ್ಷಾಂತರದ ನಂತರ ನಮ್ಮ ಪಕ್ಷದಲ್ಲಿ ಹಲವಾರು ಮುಖಂಡರು ಅತೃಪ್ತಿ ವ್ಯಕ್ತಪಡಿಸಿದ್ದರು. ಪಕ್ಷ ಬಿಟ್ಟ ಹಿರಿಯರನ್ನು ಒಗ್ಗೂಡಿಸಬೇಕೆಂಬ ಆಗ್ರಹ ವ್ಯಕ್ತವಾಗಿತ್ತು.
ಅದರ ಪ್ರಕಾರ ಶೆಟ್ಟರ ಮರಳಿ ಬಿಜೆಪಿಗೆ ಬಂದಿದ್ದಾರೆ. ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗಳಿಸೋ ಜೊತೆಗೆ ಮುಂದಿನ ವಿಧಾನಸಭೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರೋದು ನಮ್ಮ ಗುರಿ. ನಮ್ಮಿಂದ ತಪ್ಪಾಗಿದೆ, ಅದನ್ನು ಸರಿಪಡಿಸಿಕೊಳ್ಳೋ ಕೆಲಸ ಮಾಡ್ತಿದ್ದೇವೆ ಎಂದರು. ಯುವ ಮೋರ್ಚಾ ಅಧ್ಯಕ್ಷ ರೋಹಿತ ಮತ್ತಿಹಳ್ಳಿ, ಬಿಜೆಪಿ ಜಿಲ್ಲಾ ಖಜಾಂಚಿ ಮುತ್ತು ಗಾಳಪ್ಪನವರ, ಕುಸುಗಲ ಗ್ರಾ.ಪಂ. ಸದಸ್ಯ ಸೋಮು ಪಟ್ಟಣಶೆಟ್ಟಿ, ತಾಪಂ ಮಾಜಿ ಸದಸ್ಯ ಮುತ್ತು ಚಾಕಲಬ್ಬಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಭು ಗುಳಗಣ್ಣನವರ, ಕಲ್ಲಪ್ಪ ಗಿಡ್ನವರ, ನಾಗರಾಜ ಕಾಳೆ ಉಪಸ್ಥಿತರಿದ್ದರು.