ಬೆಂಗಳೂರು : ಬಿಡಿಎ ನೂತನ ಅಧ್ಯಕ್ಷರಾಗಿ ಶಾಂತಿನಗರ ಶಾಸಕ ಎನ್.ಎ ಹ್ಯಾರಿಸ್ ಬಿಡಿಎ ಕೇಂದ್ರ ಕಚೇರಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಅಧಿಕಾರ ವಹಿಸಿಕೊಂಡರು. ಶಾಸಕ ಜಮೀರ್ ಅಹ್ಮದ್ ಕೂಡ ಕಚೇರಿಗೆ ಆಗಮಿಸಿ ಶುಭ ಕೋರಿದರು.
ಈ ವಿಚಾರವನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು ಶುಭ ಕೋರಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಹ್ಯಾರಿಸ್, ಜವಾಬ್ದಾರಿಯನ್ನ ನನಗೆ ವಹಿಸಿದ್ದಾರೆ. ಬೆಂಗಳೂರು ನಗರದ ಬಗ್ಗೆ ನನಗೆ ಗೊತ್ತಿದೆ. ಈಗಾಗಲೇ ನಾಲ್ಕು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಟ್ರಾನ್ಸ್ಫರೆನ್ಸಿ ತರುವಲ್ಲಿ ಪ್ರಯತ್ನಿಸುತ್ತೇನೆ. ಬಿಡಿಎಯನ್ನ ಜನಸ್ನೇಹಿ ಮಾಡಲು ಯತ್ನಿಸುತ್ತೇನೆ. ಸಿಎಂ, ಡಿಸಿಎಂ, ಬಿಡಿಎ ಜನಸ್ನೇಹಿ ಮಾಡಿ ಎಂದಿದ್ದಾರೆ. ಹೊಸ ಲೇಔಟ್ ಬಗ್ಗೆಯೂ ಯೋಜನೆ ಇದೆ ಎಂದು ತಿಳಿಸಿದರು.
ಶಾಂತಿನಗರ ಅಭಿವೃದ್ಧಿಯಾಗಿಲ್ಲ ಈಗ ನಿಮ್ಮನ್ನ ಬಿಡಿಎ ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಹ್ಯಾರಿಸ್, ರಾಜಕೀಯವಾಗಿ ಮಾತನಾಡಿದರೇ ನಾನು ರಾಜಕೀಯ ಮಾತನಾಡ್ತೇನೆ. ಬೆಂಗಳೂರು ಎಲ್ಲವೂ ಬಿಡಿಎ ನಲ್ಲಿ ಬರಲ್ಲ. ಎಲ್ಲರ ಸಲಹೆಯನ್ನ ತೆಗೆದುಕೊಂಡು ಕೆಲಸ ಮಾಡ್ತೇನೆ. ಬಿಡಿಎಯನ್ನ ಇನ್ನಷ್ಟು ಅಭಿವೃದ್ಧಿ ಮಾಡ್ತೇವೆ. ಸಂಪನ್ಮೂಲಗಳ ಕ್ರೋಡಿಕರಣಕ್ಕೆ ಮುಂದಾಗ್ತೇವೆ ಎಂದರು.