ಹುಬ್ಬಳ್ಳಿ:- ಪ್ರಹ್ಲಾದ್ ಜೋಶಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಧಾರವಾಡ ಲೋಕಸಭಾ ಅಭ್ಯರ್ಥಿ ನಾನೇ ಎಂದು ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಮ್ಮ ಪಕ್ಷದಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಈಗಾಗಲೇ ಚುನಾವಣೆಗೆ ತಯಾರಿ ನಡಸಿದ್ದೇನೆ. ಜೋಶಿನೇ ಅಭ್ಯರ್ಥಿ ಮತ್ತೆ ಇನ್ನೇನು ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಅರವಿಂದ್ ಬೆಲ್ಲದ್, ಜೋಶಿ ಅವರೇ ನಮ್ಮ ನಾಯಕರು ಸುಮ್ಮನೆ ಏನೇನೋ ಹೇಳಬೇಡಿ ಅಂದ್ರು. ಬಳಿಕ ಮಾತು ಮುಂದುವರಿಸಿದ ಜೋಶಿ, ಶಾಸಕರು, ನಗರ ಘಟಕ ಅಧ್ಯಕ್ಷರು, ಕಾರ್ಯಕರ್ತರು ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಯಾಕೋ ರಾಷ್ಟ್ರೀಯ ಅಧ್ಯಕ್ಷ ಅಂತ ಹೇಳುತ್ತಿದ್ದಾರೆ. ಪುಣ್ಯಕ್ಕೆ ರಾಷ್ಟ್ರಪತಿ ಆಗುತ್ತಾರೆ ಅಂದಿಲ್ಲ, ಜೋಶಿ ರಾಷ್ಟ್ರಪತಿ ಆಗುತ್ತಾರೆ, ಶೆಟ್ಟರ್ ಅಭ್ಯರ್ಥಿ ಆಗುತ್ತಾರೆ ಅಂತ ಹೇಳುತ್ತಿಲ್ಲ ಅಂದ್ರು.
ಶೆಟ್ಟರ್ ಪಕ್ಷಕ್ಕೆ ವಾಪಸ್ ಆಗಿದ್ದು ಸಂತೋಷ, ಒಳ್ಳೆಯದು. ಶೆಟ್ಟರ್ ಬಂದಿದ್ದು ಸಂತೋಷ ತಂದಿದೆ. ಈ ಭಾಗದಲ್ಲಿ ಎಲ್ಲರೂ ಒಂದುಗೂಡಿ ಪಕ್ಷ ಬಲವರ್ಧನೆ ಮಾಡುತ್ತೇವೆ. ನನ್ನದು ಯಾವುದೇ ವಿರೋಧ ಇಲ್ಲ ನಾನು ಆರು ತಿಂಗಳ ಹಿಂದೆ ಶೆಟ್ಟರ್ ವಾಪಸ್ ಬರ್ತಾರೆ ಅಂತ ಹೇಳಿದ್ದೆ. ನಾನು ಇದನ್ನು ಯಾವುದೇ ವ್ಯಂಗ್ಯದಿಂದ ಹೇಳುತ್ತಿಲ್ಲ ಸಹೃದಯದಿಂದ ಹೇಳುತ್ತಿದ್ದೇನೆ. ಶೆಟ್ಟರ್ ಆಗಮನ ವಿಚಾರದಲ್ಲಿ ಸ್ಥಳೀಯ ನಾಯಕರನ್ನು ನಿರ್ಲಕ್ಷ್ಯ ಮಾಡಿಲ್ಲ ಅವರ ಗಮನಕ್ಕೆ ತಂದಿದ್ದೇನೆ ಎಂದರು.