ಬೆಂಗಳೂರು:- ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹುಲ್ಲಹಳ್ಳಿ ಬಳಿ ಸರ್ವೆ ನಂ 44ರ ಸರ್ಕಾರಿ ಗೋಮಾಳದ ಜಾಗವಾಗಿದ್ದು, ಕಳೆದ ಕೆಲ ವರ್ಷಗಳ ಹಿಂದೆ ಬಿಬಿಎಂಪಿಗೆ ನೀಡಲಾಗಿದೆ. ಈ ಕ್ವಾರಿಗೆ ಚಿಕ್ಕನಾಗಮಂಗಲ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ಸಂಸ್ಕರಿಸಿ ಉಳಿದ ವೇಸ್ಟ್ ಕಸವನ್ನು ಬಿಬಿಎಂಪಿ ಲಾರಿಗಳ ಮೂಲಕ ರಾತ್ರೋರಾತ್ರಿ ತಂದು ಸುರಿದು ಹೋಗಲಾಗುತ್ತಿದೆ.
ಇಷ್ಟು ದಿನಗಳ ಕಾಲ ಅಲ್ಲಿನ ಸುತ್ತಮುತ್ತಲಿನ ಗ್ರಾಮದ ಜನರು ಕಸದ ದುರ್ನಾತದಿಂದಾಗಿ ಸಮಸ್ಯೆ ಎದುರಿಸುತ್ತಿದ್ದರು. ಆದರೆ ಇದೀಗ ಕಸದಲ್ಲಿ ಬಾರಿ ಪ್ರಮಾಣದ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಬೆಂಕಿಯ ಜೊತೆ ದಟ್ಟ ಹೊಗೆಯಿಂದಾಗಿ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನ ಬೆಂಗಳೂರು ಹೊರವಲಯದ ಸಿಕ್ಕ ಸಿಕ್ಕ ಕಡೆಗಳಲ್ಲಿ ಡಂಪ್ ಮಾಡಲು ಮುಂದಾಗಿದ್ದಾರೆ. ಆದರೆ ವೈಜ್ಞಾನಿಕವಾಗಿ ಕಸ ಡಂಪ್ ಮಾಡುವಂತೆ ಕ್ರಮ ಕೈಗೊಳ್ಳಬೇಕಾದ ಬಿಬಿಎಂಪಿ ಅಧಿಕಾರಿಗಳ ಎಡವಟ್ಟಿನಿಂದಾಗಿ ಹುಲ್ಲಹಳ್ಳಿ ಗ್ರಾಮದ ಕ್ವಾರಿಯಲ್ಲಿ ಅವೈಜ್ಞಾನಿಕವಾಗಿ ಕಸವನ್ನ ರಾತ್ರೋರಾತ್ರಿ ತಂದು ಸುರಿಯಲಾಗುತ್ತಿದೆ.
ಕ್ವಾರಿ ಸಮೀಪವೇ ಪ್ರತಿಷ್ಠಿತ ಖಾಸಗಿ ಶಾಲೆಗಳು ಹಾಗೂ ವಸತಿ ಬಡಾವಣೆಗಳಿದ್ದರು ಸಹ ಬಿಬಿಎಂಪಿ ಅಧಿಕಾರಿಗಳು ತಲೆ ಕೇಡಿಸಿಕೊಳ್ಳದೆ ಕಸ ಸುರಿದು ಹೋಗುತ್ತಿದ್ದು, ದುರ್ನಾತ ಜೊತೆ ಹೊಗೆಯಿಂದ ಇಡೀ ವಾತಾವರಣ ಕಲುಷಿತಗೊಂಡಿದೆ. ಕಲುಪಿತ ತ್ಯಾಜ್ಯ ನೀರು ಅಂತರ್ಜಲಕ್ಕೂ ಸೇರಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಗ್ರಾಮದಲ್ಲಿ ಸಂಪೂರ್ಣ ವಾತಾವರಣ ಕಲುಷಿತಗೊಂಡು ಗ್ರಾಮಸ್ಥರು ಹಾಗೂ ಮಕ್ಕಳು ಆನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಜನಸಾಮಾನ್ಯರಿಗೆ ಇಷ್ಟೆಲ್ಲಾ ಸಮಸ್ಯೆ ಎದುರಾದರೂ ಸಹ ಬಿಬಿಎಂಪಿ ಅಧಿಕಾರಿಗಳು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕಂಡು ಕಾಣುದಂತ್ತಿದ್ದಾರೆ.