ರಾಯಚೂರು:- ತರಗತಿ ನಡೆಯುತ್ತಿದ್ದ ಸಂದರ್ಭದಲ್ಲೇ ಸೀಲಿಂಗ್ ಗಾರೆ ಕಿತ್ತುಬಿದ್ದ ಘಟನೆ ದೇವದುರ್ಗದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದೆ.
7ನೇ ತರಗತಿಯ ವಿದ್ಯಾರ್ಥಿನಿ ಶ್ರೀದೇವಿ ಎಂಬುವವರ ಬಲಕಾಲಿನ ಬೆರಳು ಕಟ್ ಆಗಿದೆ. ಕೂಡಲೇ ವಿದ್ಯಾರ್ಥಿನಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ರಾಜ್ಯದ ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಟಿವಿ9 ವರದಿ ಮಾಡುತ್ತಾ ಬಂದಿದ್ದು, ಇದೀಗ ವಿದ್ಯಾರ್ಥಿನಿ ಕಾಲು ಬೆರಳೆ ಕಟ್ ಆಗಿದೆ. ಹಾಳಾದ ಶಾಲಾ ಕಟ್ಟಡದಲ್ಲಿ ನಿತ್ಯ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದ್ದು, ಜೀವ ಭಯದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಪಾಠ ಕೇಳುವಂತಾಗಿದೆ. ಈ ಕುರಿತು ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನು ಘಟನೆ ಬಳಿಕ ದೇವದುರ್ಗ ತಾಲ್ಲೂಕು ಬಿಇಓ ಸುಖದೇವ್ ಹಾಗೂ ಇತರೆ ಅಧಿಕಾರಿಗಳು ಓಡೋಡಿ ಬಂದಿದ್ದಾರೆ. ಈ ಕುರಿತು ಮಾತನಾಡಿದ ಬಿಇಓ ‘ಕಳೆದ ವರ್ಷವೇ ಶಾಲೆ ಸ್ಥಳಾಂತರಿಸಲು ಆದೇಶಿಸಿದ್ದೆ. ಅದರಂತೆ ಕಟ್ಟಡ ಶಿಥಿಲಗೊಂಡ ಬಳಿಕ ಉರ್ದು ಶಾಲೆ ಬಂದ್ ಆಗಿ, ಬೇರೆಡೆ ಶಿಫ್ಟ್ ಮಾಡಲಾಗಿದೆ. ಆದರೆ, ಬಾಲಕಿಯರ ಕನ್ನಡ ಶಾಲೆ ಅಲ್ಲೆ ಮುಂದುವರೆಸಲಾಗಿದೆ ಎಂದರು.