ಬೆಂಗಳೂರು : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಮರಳಿ ಬಿಜೆಪಿಗೆ ವಾಪಾಸ್ ಬಂದಿರುವುದು ಅತ್ಯಂತ ಸಂತೋಷ ತಂದಿದೆ, ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅಭಿಪ್ರಾಯಪಟ್ಟರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರಭಾವಿ ಬಿಜೆಪಿಯ ಕಟ್ಟಾಳು ಜಗದೀಶ್ ಶೆಟ್ಟರ್ ಅವರು ಕಾಲದಿಂದಲೂ ಸಂಘ ಪರಿವಾರದ ಶಿಸ್ತಿನ ಸಿಪಾಯಿ, ಸರ್ಕಾರದ ಅನೇಕ ಅಭಿವೃದ್ದಿಕಾರ್ಯಗಳನ್ನು ಮಾಡಿ ಸಿಎಂ ಪಟ್ಟಕ್ಕೆ ಏರಿದ್ದರು.
ಸದ್ಯ, ಬಿಜೆಪಿಗೆ ಶೆಟ್ಟರ್ ವಾಪಾಸ್ ಬಂದಿದ್ದಾರೆ. ಈಗ ಯಾಕೆ ಬಂದ್ರು ಅಂತ ಕಾರಣ ಹುಡುಕೋ ಸಮಯ ಇದಲ್ಲ, ಲೋಕಸಭೆ ಚುನಾವಣೆಯಲ್ಲಿ ಈ ಭಾರಿ 28ಕ್ಕೆ 28 ಗೆಲ್ಲಬೇಕು. ಡಿಕೆಶಿ ಹೇಳ್ತಿದ್ರು ಶೆಟ್ಟರ್ ಹೋಗಲ್ಲ ಅಂತ. ಈಗ ಶೆಟ್ಟರ್ ವಾಪಸ್ ಬಂದಿದ್ದಾರೆ. ನರೇಂದ್ರ ಮೋದಿ ಅವರು ಮೂರನೇ ಭಾರಿ ಪ್ರಧಾನಿ ಆಗಬೇಕು. INDI ಒಕ್ಕೂಟದಿಂದ ಮಮತಾ, ಪಂಜಾಬ್ ಸಿಎಂ ವಾಪಸ್ ಹೋಗಿದ್ದಾರೆ. ಒಕ್ಕೂಟ ಛಿದ್ರ, ಛಿದ್ರ ಆಗಿದೆ. ಶೆಟ್ಟರ್ ಈಗಾಗಲೇ ಬಿಜೆಪಿಗೆ ವಾಪಸ್ ಬಂದಿದ್ದಾರೆ, ಬೇರೆ ಯಾರು ಬರ್ತಾರೆ ಗೊತ್ತಿಲ್ಲ. ಕಾಂಗ್ರೆಸ್ ಆಪರೇಷನ್ ನೂರಕ್ಕೆ ನೂರು ಉಲ್ಟಾ ಆಗಲಿದೆ. ಲೋಕಸಭಾ ಚುನಾವಣೆ ಬಳಿಕ, ರಾಜ್ಯದಲ್ಲಿ ರೈತರ, ಮಹಿಳೆಯರ ಶಾಪದಿಂದ ಸರ್ಕಾರ ಬೀಳಲಿದೆ ಎಂದು ಅವರು ಭವಿಷ್ಯ ನುಡಿದರು.