ರಾಯಚೂರು:- ಜಿಲ್ಲೆಯ ಸಿಂಧನೂರು ತಾಲೂಕಿನ ಚಿಕ್ಕಬೇರ್ಗಿ ಗ್ರಾಮದಲ್ಲಿ ಮನೆ ಮುಂದೆ ಕುಳಿತಿದ್ದ ವೃದ್ಧನನ್ನು ಕಂಬಕ್ಕೆ ಕಟ್ಟಿಹಾಕಿ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಜರುಗಿದೆ.
ಆರೋಪಿಗಳು ಕನಿಷ್ಠ ಮನುಷ್ಯತ್ವವೂ ಇಲ್ಲದ ರೀತಿ ವರ್ತಿಸಿರುವುದನ್ನು ಕಾಣಬಹುದು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಂಜೆ ವೇಳೆ ಮನೆ ಬಳಿ ಕಟ್ಟೆ, ಊರಿನ ಮಧ್ಯಭಾಗದಲ್ಲಿ ಜನರು ಕೂತುಕೊಳ್ಳುತ್ತಾರೆ. ಅದೇ ರೀತಿ ಚಿಕ್ಕಬೇರ್ಗಿ ಗ್ರಾಮದ ಲಿಂಗಪ್ಪ ಎಂಬ 53 ವರ್ಷದ ವೃದ್ಧ ಕೂಡ ಹೊಲದಿಂದ ಬಂದು ಎತ್ತುಗಳನ್ನ ಕಟ್ಟಿ ನಂತರ ಮನೆ ಬಳಿ ಕೂತುಕೊಂಡಿದ್ದ. ಈ ವೇಳೆ ಇದೇ ಗ್ರಾಮದ ಕೆಲವರು ಲಿಂಗಪ್ಪನ ಮೇಲೆ ಮುಗಿ ಬಿದ್ದಿದ್ದಾರೆ.
ಅಷ್ಟೇ ಅಲ್ಲದೆ, ನೋಡನೋಡುತ್ತಲೇ ಲಿಂಗಪ್ಪನನ್ನ ಎಳೆದಾಡಿ ಹೊಡೆಯಲಾರಂಭಿಸಿದ್ದಾರೆ. ಆರೋಪಿಗಳು ಕಲ್ಲು, ದೊಣ್ಣೆಗಳಲ್ಲಿಂದ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಚಪ್ಪಲಿಯಿಂದ ಸಿಕ್ಕಸಿಕ್ಕಲ್ಲಿ ಹೊಡೆದಿದ್ದಾರೆ. ಆಗ ಲಿಂಗಪ್ಪ ನಾನೇನು ಅಂದಿಲ್ಲ ಬಿಟ್ ಬಿಡಿ ಅಂತ ಪರಿಪರಿಯಾಗಿ ಬೇಡಿಕೊಂಡರೂ ಆತನ ಮಾತು ಕೇಳಿಸಿಕೊಳ್ಳದ ಆರೋಪಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಲ್ಲೆಗೊಳಗಾಗಿ ಗಾಯಗೊಂಡಿದ್ದ ಲಿಂಗಪ್ಪ ನಿತ್ರಾಣಗೊಂಡಿದ್ದ. ಕೂಡಲೇ ಆತನನ್ನ ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮಾಹಿತಿ ತಿಳಿದು ತುರ್ವಿಹಾಳ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ನಂತರ ಲಿಂಗಪ್ಪನ ಕುಟುಂಬಸ್ಥರು ತಮ್ಮೂರಿನ ಒಂಬತ್ತು ಜನರ ವಿರುದ್ಧ ತುರ್ವಿಹಾಳ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಹನಮಂತ, ಯಮನೂರು, ಬೀರಪ್ಪ ಸೇರಿದಂತೆ ಒಟ್ಟು 9 ಜನರ ವಿರುದ್ಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.