ಮಂಡ್ಯ :- ಮೇಲುಕೋಟೆ ಶಿಕ್ಷಕಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಕ್ಕ ಅಕ್ಕ ಅಂತ ಅಂತಿದವನಿಂದಲೇ ಮೂಹೂರ್ತ ಇಟ್ಟನಾ? ಎಂಬ ಗುಮಾನಿ ಮೂಡಿದೆ.
ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಶಿಕ್ಷಕಿ ದೀಪಿಕಾ (28) ಮೃತದೇಹ ಕೊಲೆ ಮಾಡಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈಕೆಯ ಕೊಲೆಯ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿತ್ತು. ಇದೀಗ ಸ್ವಗ್ರಾಮದ ಯುವಕನ ವಿರುದ್ಧ ಮೃತ ದೀಪಿಕಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ದೀಪಿಕಾ ನಾಪತ್ತೆಗೂ ಮುನ್ನ ನಿತೀಶ್ ಎಂಬಾತ ಕೊನೆಯ ಕರೆ ಮಾಡಿದ್ದ. ದೀಪಿಕಾ ಮೃತದೇಹ ಸಿಗುತ್ತಿದ್ದಂತೆ ಯುವಕ ಗ್ರಾಮದಿಂದ ನಾಪತ್ತೆಯಾಗಿದ್ದಾನೆ.
ನಿತೀಶ್ ಅಕ್ಕ ಅಕ್ಕ ಎನ್ನುತ್ತಲೇ ದೀಪಿಕಾ ಜೊತೆ ಸ್ನೇಹ ಬೆಳೆಸಿದ್ದ. ಒಂದೇ ಊರಿನವನಾದ್ದರಿಂದ ದೀಪಿಕಾ ಆತನ ಜೊತೆ ಸಲುಗೆಯಿಂದಲೇ ಮಾತನಾಡುತ್ತಿದ್ದಳು. ನಿತೀಶ್ನಿಂದಲೇ ದೀಪಿಕಾ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕೊಲೆಗೂ ಮುನ್ನ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಮತ್ತು ನಿತೀಶ್ ಜಗಳವಾಡುತ್ತಿದ್ದ ವೀಡಿಯೋ ಸೆರೆಯಾಗಿದೆ. 13 ಸೆಕೆಂಡ್ಗಳ ವಿಡಿಯೋ ರೆಕಾರ್ಡ್ ಮಾಡಿದ್ದ ಪ್ರವಾಸಿಗರು ಅದನ್ನು ಪೊಲೀಸರಿಗೆ ನೀಡಿದ್ದಾರೆ. ನಾಪತ್ತೆ ದೂರು ನೀಡಿದ್ರು, ಜಗಳ ವಿಡಿಯೋ ಸಿಕ್ಕಿದ್ರು ಗಂಭೀರವಾಗಿ ಪರಿಗಣಿಸದೆ ಪೊಲೀಸರ ನಿರ್ಲಕ್ಷ್ಯ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಬಳಿಕ ಬೆಟ್ಟದ ತಪ್ಪಲಿನಲ್ಲೇ ದೀಪಿಕಾಳ ಡಿಯೋ ಸ್ಕೂಟರ್ ಪತ್ತೆಯಾಗಿದೆ. ಸ್ಕೂಟರ್ ಪತ್ತೆಯಾದ ಸ್ಥಳದ ಸುತ್ತಮುತ್ತ ದೀಪಿಕಾಳಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ ವೇಳೆ ಹೂತಿದ್ದ ಸ್ಥಿತಿಯಲ್ಲಿ ಮೃತದೇಹ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಕುಟುಂಬಸ್ಥರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಹಶಿಲ್ದಾರ್ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನು ಆರೋಪಿ ಪತ್ತೆಗೆ 2 ವಿಶೇಷ ತಂಡ ರಚನೆ ಮಾಡಲಾಗಿದೆ. ಈ ಕುರಿತು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ